ADVERTISEMENT

ಮೇಕೆ ಕಳ್ಳತನ ಜಗಳ: ಗುಂಡಿಕ್ಕಿ ವ್ಯಕ್ತಿಯೊಬ್ಬರ ಕೊಲೆ!

ಏಜೆನ್ಸೀಸ್
Published 9 ಅಕ್ಟೋಬರ್ 2022, 10:54 IST
Last Updated 9 ಅಕ್ಟೋಬರ್ 2022, 10:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಹೊಲದಿಂದ ಮೇಕೆ ಕಳ್ಳತನ ಮಾಡಿರುವ ಕ್ಷುಲ್ಲಕ ಜಗಳವೊಂದು ಕೊಲೆಗೆ ತಿರುಗಿದ ವಿಚಿತ್ರ ಘಟನೆ ಮೆಟ್ಟುಪಾಲಯಂ ಜಿಲ್ಲೆಯಲ್ಲಿ ನಡೆದಿದೆ.

ಚಿನ್ನಸ್ವಾಮಿ(53) ಕೊಲೆಯಾದ ವ್ಯಕ್ತಿ. ಇವರನ್ನು ಅದೇ ಊರಿನ ರಂಜಿತ್‌ (28) ಎಂಬಾತ ಬಂದೂಕಿನಿಂದ ಗುಂಡಿಕ್ಕಿ ಕೊಲೆಗೈದಿದ್ದಾನೆ.
ರೈತ ಚಿನ್ನಸ್ವಾಮಿ ಮೇಕೆ ಸಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಮನೆಯಿಂದ ಕೆಲವು ಮೇಕೆಗಳು ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿತ್ತು. ಕಳ್ಳತನವಾಗಿರಬಹುದೆಂಬ ಅನುಮಾನ ಆರಂಭವಾಗಿತ್ತು.

ರಂಜಿತ್‌ ಮೇಕೆ ಕದಿಯುತ್ತಿದ್ದಾನೆ ಎಂದು ಸ್ಥಳೀಯರು ಚಿನ್ನಸ್ವಾಮಿಗೆ ಮಾಹಿತಿ ನೀಡಿದ್ದಾರೆ. ಆತ ಊರಿನಲ್ಲಿ ಸದಾ ಮೇಕೆ ಕಳ್ಳತನ ಮಾಡುತ್ತಿದ್ದಾನೆಂಬ ಆರೋಪವಿತ್ತು. ಇದನ್ನು ಖಚಿತಪಡಿಸಿಕೊಂಡ ಚಿನ್ನಸ್ವಾಮಿ, ಶನಿವಾರ ರಂಜಿತ್‌ ಬಳಿ ಜಗಳ ಆಡಿದ್ದಾರೆ. ಆದರೆ ರಂಜಿತ್ ಯಾವುದೇ ಮೇಕೆಗಳನ್ನು ಚಿನ್ನಸ್ವಾಮಿಗೆ ಹಿಂದಿರುಗಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಘಟನೆಯಿಂದ ಕೋಪಗೊಂಡ ಚಿನ್ನಸ್ವಾಮಿ, ರಂಜಿತ್‌ಗೆ ಚೆನ್ನಾಗಿ ನಿಂದಿಸಿದ್ದಾರೆ. ಭಯಗೊಂಡ ಆರೋಪಿ ರಂಜಿತ್‌ ತಕ್ಷಣ ಊರಿನಿಂದ ಜಾಗ ಖಾಲಿ ಮಾಡಿದ್ದಾನೆ.

ಭಾನುವಾರ ಮುಂಜಾನೆ ರಂಜಿತ್‌ ಬಂದೂಕಿನೊಂದಿಗೆ ಊರಿಗೆ ಮರಳಿದ್ದು, ಚಿನ್ನಸ್ವಾಮಿಯನ್ನು ಕರೆಸಿಕೊಂಡು ಬಂದೂಕಿನಿಂದ ಕೊಲೆಗೈದಿದ್ದಾನೆ. ಚಿನ್ನಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ರಂಜಿತ್‌ನನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.