
ಪಿಟಿಐ
ನವದೆಹಲಿ: ‘ನಾನು ‘ಗಾಂಧಿವಾದಿ’, ‘ನೆಹರೂವಾದಿ’ ಮತ್ತು ‘ರಾಜೀವ್ವಾದಿ’, ಆದರೆ ‘ರಾಹುಲ್ವಾದಿ’ ಅಲ್ಲ. ಏಕೆಂದರೆ ರಾಹುಲ್ ನನಗಿಂತ ತುಂಬಾ ಕಿರಿಯರು. ರಾಜಕೀಯ ಜೀವನದಲ್ಲಿ ನನ್ನಿಂದ ಬಹಳ ದೂರದಲ್ಲಿದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಬುಧವಾರ ಹೇಳಿದರು.
‘ಹಾಗೆಯೇ ನಾನು ‘ಇಂದಿರಾವಾದಿ’ ಎಂದೂ ಹೇಳುವುದಿಲ್ಲ. ಏಕೆಂದರೆ ತುರ್ತು ಪರಿಸ್ಥಿತಿ ಹೇರಿಕೆ ಮೂಲಕ ಪ್ರಜಾಪ್ರಭುತ್ವವನ್ನು18 ತಿಂಗಳು ನಿರಂಕುಶ ಪ್ರಭುತ್ವವಾಗಿ ಪರಿವರ್ತಿಸಿದ ಇಂದಿರಾ ಅವರನ್ನು ನಾನು ಒಪ್ಪುವುದಿಲ್ಲ’ ಎಂದರು.
‘ರಾಹುಲ್ ನನಗಿಂತ 30 ವರ್ಷ ಕಿರಿಯರಾಗಿರುವಾಗ ಮತ್ತು ಅವರೊಂದಿಗೆ ಕೆಲಸ ಮಾಡುವ ಅವಕಾಶವೂ ಸಿಗದಿದ್ದಾಗ ‘ರಾಹುಲ್ವಾದಿ’ ಎಂದು ಹೇಳಬೇಕು ಎಂದು ಹೇಗೆತಾನೆ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ಮಹಾತ್ಮ ಗಾಂಧಿ ಅವರು ನಮ್ಮನ್ನು ಎತ್ತಿಹಿಡಿದು, 'ನೀವು ನನ್ನ ಕಣ್ಣಿನಲ್ಲಿ ಸೂರ್ಯ ಮತ್ತು ಚಂದ್ರರಂತೆ ಕಾಣುತ್ತಿದ್ದೀರಿ’ ಎಂದು ಹೇಳಿದಾಗ ನನಗೆ ಆರು ವರ್ಷ, ನನ್ನ ಸಹೋದರನಿಗೆ ನಾಲ್ಕು ವರ್ಷ. ಅಲ್ಲಿಂದ ನಾನು ಗಾಂಧಿವಾದಿಯಾದೆ. ನೆಹರೂ ಪ್ರಧಾನಿಯಾದಾಗ ನನಗೆ ಆರು ವರ್ಷ. ಅಲ್ಲಿಂದ 23 ವರ್ಷಗಳವರೆಗೆ ನೆಹರೂ ತತ್ತ್ವಗಳನ್ನು ಕೇಳುತ್ತಾ ಬೆಳೆದಿದ್ದೇನೆ. ಹೀಗಾಗಿ ‘ನೆಹರೂವಾದಿ’ ಎಂದು ಕರೆದುಕೊಳ್ಳುತ್ತೇನೆ.
‘ರಾಜೀವ್ ನನಗಿಂತ ಎರಡು ವರ್ಷ ಕಿರಿಯರಾದರೂ ನನ್ನನ್ನು ಪ್ರಧಾನಿ ಕಾರ್ಯಾಲಯಕ್ಕೆ ಕರೆದೊಯ್ದಿದ್ದರು. ಅವರು ಮಾಡುವ ಕೆಲಸಗಳಿಂದ ನಾನು ಚಕಿತನಾಗಿದ್ದೆ. ಹೀಗಾಗಿ ನಾನು ‘ರಾಜೀವ್ವಾದಿ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.