ADVERTISEMENT

CBI ಚಾರ್ಚ್‌ಶೀಟ್‌ನಲ್ಲಿ ಸಿಸೋಡಿಯಾ ಹೆಸರಿಲ್ಲ, ಇಡೀ ಪ್ರಕರಣವೇ ನಕಲಿ: ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2022, 13:19 IST
Last Updated 25 ನವೆಂಬರ್ 2022, 13:19 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಮೊದಲ ಚಾರ್ಚ್‌ಶೀಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಚಾರ್ಚ್‌ಶೀಟ್‌ನಲ್ಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಹೆಸರಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಮುಂದುವರಿದು, ಸಿಸೋಡಿಯಾ ವಿರುದ್ಧ ಸಿಬಿಐ ನಡೆಸಿದ ತನಿಖೆ ವೇಳೆ ಯಾವುದೇ ಅಕ್ರಮವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.ಅಬಕಾರಿ ನೀತಿಗೆ ಸಂಬಂಧಿಸಿದಇಡೀ ಪ್ರಕರಣವೇ ನಕಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿದ್ದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಬಿಐ ಇದೇ ಮೊದಲ ಬಾರಿಗೆ ರೋಸ್‌ ಅವೆನ್ಯೂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದೆ. ಅದರಲ್ಲಿ ವಿಜಯ್‌ ನಾಯರ್‌,ಅಭಿಷೇಕ್‌ ಬೊಯಿನಪಲ್ಲಿ, ಸಮೀರ್ ಮಹೇಂದ್ರು, ಅರಣ್ ರಾಮಚಂದ್ರ ಪಿಳ್ಳೈ, ಮೂಥಾ ಗೌತಮ್, ಅಬಕಾರಿ ಇಲಾಖೆಯ ಉಪ ಆಯುಕ್ತರಾಗಿದ್ದ ಕುಲದೀಪ್ ಸಿಂಗ್, ಸಹಾಯಕ ಕಮೀಷನರ್ ಆಗಿದ್ದ ನರೇಂದ್ರ ಸಿಂಗ್ ಅವರನ್ನು ಆರೋಪಿಗಳೆಂದು ಉಲ್ಲೇಖಿಸಿದೆ. ಪೂರಕವಾಗಿ ಮತ್ತೊಂದು ಚಾರ್ಚ್‌ಶೀಟ್‌ ದಾಖಲಿಸಲಾಗುವುದು ಎಂದೂ ತಿಳಿಸಿದೆ.

ADVERTISEMENT

ಈ ಬಗ್ಗೆ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, 'ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸಿಸೋಡಿಯಾ ಅವರ ಹೆಸರಿಲ್ಲ.ಇಡೀ ಪ್ರಕರಣ ನಕಲಿ. ತನಿಖಾ ಸಂಸ್ಥೆಗಳ ಶೋಧ ಕಾರ್ಯಾಚರಣೆ ವೇಳೆಯೂ ಯಾವುದೇ ಅಕ್ರಮ ಪತ್ತೆಯಾಗಿಲ್ಲ. 800 ಅಧಿಕಾರಿಗಳು ನಾಲ್ಕು ತಿಂಗಳು ತನಿಖೆ ನಡೆಸಿದರೂ ಏನೂ ಸಿಕ್ಕಿಲ್ಲ. ಸಿಸೋಡಿಯಾ ಅವರು ಕ್ರಾಂತಿಕಾರಿ ಶಿಕ್ಷಣ ನೀತಿಯ ಮೂಲಕ ದೇಶದ ಕೋಟ್ಯಂತರ ಬಡ ಮಕ್ಕಳಲ್ಲಿ ಭರವಸೆ ಮೂಡಿಸಿದ್ದಾರೆ. ಅಂತಹ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿರುವುದಕ್ಕೆ ವಿಷಾದಿಸುತ್ತೇನೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.