ಚೆನ್ನೈ: ರಾಜ್ಯಸಭೆಗೆ ತಮಿಳುನಾಡಿನಿಂದ ಇದೇ 18ರಂದು ನಡೆಯಲಿರುವ ಚುನಾವಣೆಗೆ ವಕೀಲ ಪಿ. ವಿಲ್ಸನ್ ಮತ್ತು ಕಾರ್ಮಿಕ ಮುಖಂಡ ಎಂ. ಷಣ್ಮುಗಂ ಅವರನ್ನು ಡಿಎಂಕೆ ಆಯ್ಕೆ ಮಾಡಿದೆ. ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಕಾಂಗ್ರೆಸ್ ಬಯಸಿದೆ. ಇದಕ್ಕಾಗಿ ಡಿಎಂಕೆ ಜತೆಗೆ ಮಾತುಕತೆಯನ್ನೂ ನಡೆಸಿದೆ’ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ, ಅವು ಈಗ ಸುಳ್ಳಾಗಿವೆ. ಮನಮೋಹನ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಕಳೆದ ತಿಂಗಳು ಕೊನೆಗೊಂಡಿತ್ತು. ಸತತ 28 ವರ್ಷ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು.
ತಮಿಳುನಾಡಿನಿಂದ ರಾಜ್ಯಸಭೆಯ ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯಲ್ಲಿ ಡಿಎಂಕೆ 108 ಸದಸ್ಯರನ್ನು ಹೊಂದಿದೆ. ಮಿತ್ರಪಕ್ಷಗಳ ಬೆಂಬಲದಿಂದ ಪಕ್ಷವು ಮೂರು ಸ್ಥಾನಗಳನ್ನು ಗೆಲ್ಲಲು ಸಾಧ್ಯ. ಮಿತ್ರಪಕ್ಷ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರಿಗೆ ಒಂದು ಸ್ಥಾನವನ್ನು ಬಿಟ್ಟುಕೊಡುವುದಾಗಿ ಡಿಎಂಕೆ ಹಿಂದೆಯೇ ಭರವಸೆ ಕೊಟ್ಟಿತ್ತು. ಉಳಿದ ಎರಡು ಸ್ಥಾನಗಳಿಗೆ ಈಗ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ.
ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರನ್ನು ಮರೀನಾ ಕಡಲ ಕಿನಾರೆಯಲ್ಲಿ ಸಮಾಧಿ ಮಾಡುವ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಈ ಪ್ರಕರಣದಲ್ಲಿ ಡಿಎಂಕೆ ಪರವಾಗಿ ವಿಲ್ಸನ್ ವಾದಿಸಿದ್ದರು. ಡಿಎಂಕೆ ಪರವಾಗಿ ಹಲವು ಪ್ರಕರಣಗಳಲ್ಲಿ ಅವರು ವಾದಿಸಿದ್ದಾರೆ.
ತಮಿಳುನಾಡಿನ ಕಾರ್ಮಿಕ ಹೋರಾಟದ ಮುಂಚೂಣಿಯಲ್ಲಿರುವ ಷಣ್ಮುಗಂ ಅವರು ಡಿಎಂಕೆಯ ಕಾರ್ಮಿಕ ವಿಭಾಗದ ಮುಖ್ಯಸ್ಥ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.