ADVERTISEMENT

ಕಾಳಿ ದೇವಿಯ ಪಾದದ ಮೇಲೆ ವ್ಯಕ್ತಿಯ ರುಂಡ ಪತ್ತೆ: ತೆಲಂಗಾಣದಲ್ಲಿ ಆಗಿದ್ದಾದರೂ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2022, 7:43 IST
Last Updated 11 ಜನವರಿ 2022, 7:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಕಾಳಿ ದೇವಿಯ ಮೂರ್ತಿಯ ಪಾದದ ಮೇಲೆ ವ್ಯಕ್ತಿಯೊಬ್ಬರ ಕತ್ತರಿಸಿದ ರುಂಡ ಪತ್ತೆಯಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ದೇವಾಲಯದ ಆವರಣದಲ್ಲಿ ಕಾಳಿ ದೇವಿಯ ಬೃಹತ್‌ ಮೂರ್ತಿಯನ್ನು ನಿರ್ಮಿಸಲಾಗಿದೆ. ಮೂರ್ತಿಯ ಪಾದದ ಮೇಲೆ ವ್ಯಕ್ತಿಯ ಕತ್ತರಿಸಿದ ರುಂಡವನ್ನು ಕಂಡ ಅರ್ಚಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ಎಂಟು ವಿಶೇಷ ತಂಡಗಳನ್ನು ರಚಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಸುಮಾರು 30 ವರ್ಷದ ವ್ಯಕ್ತಿಯನ್ನು ಬೇರೆಡೆ ಹತ್ಯೆ ಮಾಡಿಮಾಡಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಬಳಿಕ ಕಿಡಿಗೇಡಿಗಳು ಆತನ ಕತ್ತರಿಸಿದ ರುಂಡವನ್ನು ತಂದು ವಿಗ್ರಹದ ಪಾದದ ಬಳಿ ಇರಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ದೇವರಕೊಂಡದ ಉಪ ಪೊಲೀಸ್ ವರಿಷ್ಠಾಧಿಕಾರಿ ಆನಂದರೆಡ್ಡಿ ತಿಳಿಸಿದ್ದಾರೆ.

ರುಂಡ ಪತ್ತೆಯಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.