ನವದೆಹಲಿ: ಭಾನುವಾರ ದೆಹಲಿಯ ಅನಾಜ್ ಮಂಡಿ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಉರಿಯುತ್ತಿದ್ದ ಕಟ್ಟಡದೊಳಗೆ ನುಗ್ಗಿ 11 ಮಂದಿಯ ಪ್ರಾಣ ಉಳಿಸಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಶುಕ್ಲಾ.
ಹಲವಾರು ಮಂದಿ ಕಟ್ಟಡದೊಳಗೆ ಉಸಿರುಗಟ್ಟಿ ಒದ್ದಾಡುತ್ತಿದ್ದಾಗ ಜೀವದ ಹಂಗು ತೊರೆದು ಶುಕ್ಲಾ ಆ ಕಟ್ಟಡದೊಳಗೆ ಪ್ರವೇಶಿಸಿದ್ದರು. ರಾಜೇಶ್ ಶುಕ್ಲಾ ಅವರ ಕಾರ್ಯವನ್ನು ಶ್ಲಾಘಿಸಿದ ದೆಹಲಿಯಸಚಿವ ಸತ್ಯೇಂದ್ರ ಜೈನ್, ಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಶುಕ್ಲಾ ಅವರುನಿಜವಾದ ಹೀರೊ. ಉರಿಯುತ್ತಿರುವ ಕಟ್ಟಡದೊಳಗೆ ಮೊದಲು ಪ್ರವೇಶಿಸಿದ ಅವರು 11 ಮಂದಿಯ ಪ್ರಾಣ ಉಳಿಸಿದ್ದಾರೆ. ರಕ್ಷಣಾ ಕಾರ್ಯದ ನಡುವೆ ಅವರಿಗೆ ಗಾಯವಾದರೂ ಅದನ್ನು ಲೆಕ್ಕಿಸಿದೆ ಜನರ ರಕ್ಷಣೆ ಮಾಡಿದ್ದಾರೆ. ಈ ಧೀರನಿಗೆ ನಮನಗಳು ಎಂದು ಟ್ವೀಟಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವೇಳೆ ರಾಜೇಶ್ ಶುಕ್ಲಾ ಅವರ ಕಾಲಿಗೆ ಗಾಯಗಳಾಗಿವೆ. ಅವರು ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಚಿವರು ಅಲ್ಲಿಗೆ ಭೇಟಿ ನೀಡಿದ್ದಾರೆ.
ದೆಹಲಿಯ ರಾಣಿ ಝಾನ್ಸಿ ರಸ್ತೆಯಲ್ಲಿರುವ ಅನಾಜ್ ಮಂಡಿ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 43 ಮಂದಿ ಸಾವಿಗೀಡಾಗಿದ್ದಾರೆ. 50 ಮಂದಿಯನ್ನು ರಕ್ಷಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಗ್ನಿ ದುರಂತ ಸಂಭವಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.