ಮಥುರಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾವಚಿತ್ರಗಳನ್ನು ಕಸದ ಗಾಡಿಯಲ್ಲಿ ಕೊಂಡೊಯ್ಯುತ್ತಿದ್ದ, ಗುತ್ತಿಗೆ ಆಧಾರದ ಪೌರಕಾರ್ಮಿಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಮಥುರಾದ ಜನರಲ್ಗಂಜ್ ಪ್ರದೇಶದಲ್ಲಿ ಪೌರಕಾರ್ಮಿಕ ಬಾಬಿ ಎಂಬುವವರು ತಮ್ಮ ಕೈಬಂಡಿಯಲ್ಲಿ ಮೋದಿ ಮತ್ತು ಆದಿತ್ಯನಾಥ್ ಅವರ ಭಾವಚಿತ್ರಗಳನ್ನು ಹೊತ್ತೊಯ್ಯುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ವೈರಲ್ ಆಗಿತ್ತು.
ಭಾವಚಿತ್ರಗಳನ್ನು ಹೀಗೇಕೆ ಹೊತ್ತೊಯ್ಯುತ್ತಿರುವಎಂದು ಕೆಲ ಮಂದಿ ಬಾಬಿಯನ್ನು ಪ್ರಶ್ನೆ ಮಾಡಿದ್ದಾರೆ. ಚಿತ್ರಗಳು ರಸ್ತೆಯೊಂದರಲ್ಲಿ ಸಿಕ್ಕವು. ನಾನು ನನ್ನ ಕೆಲಸ ಮಾಡುತ್ತಿದ್ದೇನೆ ಎಂದು ಪೌರಕಾರ್ಮಿಕ ಬಾಬಿ ಉತ್ತರಿಸುತ್ತಿರುವುದು ವಿಡಿಯೊದಲ್ಲಿದೆ.
ಭಾವಚಿತ್ರಗಳು ಬಹುತೇಕ ಹಾಳಾಗಿದ್ದು, ಅವುಗಳನ್ನು ಕೆಲ ಮಂದಿ ಕಸದ ಬಂಡಿಯಿಂದ ಮೇಲಕ್ಕೆತ್ತುಕೊಂಡಿದ್ದಾರೆ. ಇದೆಲ್ಲವೂ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
ಅವರಲ್ಲಿ ಒಬ್ಬರು ಭಾವಚಿತ್ರಗಳನ್ನು ತೊಳೆದು ತಮ್ಮೊಂದಿಗೆ ತೆಗೆದುಕೊಂಡು ಹೋಗಿರುವುದು ಮತ್ತೊಂದು ವೈರಲ್ ವಿಡಿಯೊದಲ್ಲಿ ಕಂಡು ಬಂದಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಪೌರಕಾರ್ಮಿಕ ಬಾಬಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಮಥುರಾ-ವೃಂದಾವನ ನಗರ ನಿಗಮದ ಹೆಚ್ಚುವರಿ ನಗರ ಪಾಲಿಕೆ ಆಯುಕ್ತ ಸತ್ಯೇಂದ್ರ ಕುಮಾರ್ ತಿವಾರಿ ತಿಳಿಸಿದ್ದಾರೆ.
‘ನಾನು ಕಸ ಸಂಗ್ರಹಿಸುವ ಕೆಲಸವನ್ನಷ್ಟೇ ಮಾಡಿದ್ದೆ’ ಎಂದು ಬಾಬಿ ಹೇಳಿಕೊಂಡಿದ್ದಾರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಯ ಭಾವಚಿತ್ರವನ್ನು ಇರಿಸಿದ್ದು ನನ್ನ ತಪ್ಪಲ್ಲ ಎಂದು ಅವರು ಹೇಳಿದ್ದಾರೆ.
'ಕೆಲಸದಿಂದ ತೆಗೆಯುವ ಮೊದಲು ಕನಿಷ್ಠ ವಾಸ್ತವ ತಿಳಿಯಬೇಕು. ಇಲ್ಲಿ ನನ್ನ ತಪ್ಪಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.