
ನವದೆಹಲಿ: ಬೆಂಗಳೂರು ಮೂಲದ ಮಹಿಳೆ ಮ್ಯಾಟ್ರಿಮೋನಿ ವೆಬ್ಸೈಟ್ವೊಂದರ ಮೂಲಕ ದೆಹಲಿಯ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದು ವಂಚನೆಗೊಳಗಾದ ಪ್ರಸಂಗ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
39 ವರ್ಷದ ಮಹಿಳೆ ಏರ್ಲೈನ್ಸ್ ಉದ್ಯೋಗಿಯಾಗಿದ್ದು, 15 ದಿನಗಳ ಹಿಂದೆ ವಧು–ವರ ಅನ್ವೇಷಣೆಗೆ ಸಂಬಂಧಿತ ಮದುವೆ ವೆಬ್ಸೈಟ್ವೊಂದರ ಮೂಲಕ ಅನ್ಶೂಲ್ ಜೈನ್ ಎಂಬವರ ಸಂಪರ್ಕಕ್ಕೆ ಬಂದಿದ್ದರು.
‘ಅನ್ಶೂಲ್ ತಾನೊಬ್ಬ ಉದ್ಯಮಿ ಎಂದು ಹೇಳಿಕೊಂಡಿದ್ದಾನೆ. ಆತನ ಕುಟುಂಬಕ್ಕೆ ನನ್ನನ್ನು ಪರಿಚಯಿಸಿಕೊಳ್ಳುವ ನೆಪದಿಂದ ದೆಹಲಿಗೆ ಕರೆಸಿಕೊಂಡಿದ್ದಾನೆ. ಈ ಸಂದರ್ಭ ಮನಮೆಚ್ಚುವ ಉಡುಪು ಹಾಗೂ ಚಿನ್ನಾಭರಣಗಳನ್ನು ತರುವಂತೆ ಆರೋಪಿ ನನ್ನಲ್ಲಿ ಕೇಳಿಕೊಂಡಿದ್ದನು‘ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ನನ್ನನ್ನು ಬರಮಾಡಿಕೊಂಡ ಆರೋಪಿ ಹೊಟೇಲೊಂದರಲ್ಲಿ ಊಟ ಮಾಡಿಸಿದ್ದನು. ನಂತರ ಆತನ ಕಾರಿನಲ್ಲಿ ತೆರಳುತ್ತಿದ್ದಾಗ ಕಾರಿನ ಚಕ್ರ ಹದಗೆಟ್ಟಿದೆ ಎಂದು ರಸ್ತೆಯ ಬದಿ ನಿಲ್ಲಿಸಿದ್ದು, ಚಕ್ರ ಪರಿಶೀಲಿಸಲು ತಿಳಿಸಿದರು. ಆಗ ನಾನು ಕೆಳಗಿಳಿಯುವ ವೇಳೆ ಆತ ನನ್ನ ಬೆಲೆಬಾಳುವ ವಸ್ತುಗಳೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾನೆ' ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.
300 ಗ್ರಾಂ ಚಿನ್ನಾಭರಣ, ₹ 15 ಸಾವಿರ ನಗದು, ಮೊಬೈಲ್ ಹಾಗೂ ಮೂರು ಎಟಿಎಂ ಕಾರ್ಡುಗಳನ್ನು ಅಪಹರಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.