ADVERTISEMENT

ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ

ಪಿಟಿಐ
Published 19 ಜುಲೈ 2023, 12:59 IST
Last Updated 19 ಜುಲೈ 2023, 12:59 IST
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ   

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದರು. 

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮಾತ್ರವಲ್ಲದೇ ಮುಂಬರಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೂಡ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದರು.

ನಾವು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ಹೊಸದಾಗಿ ರಚನೆಯಾಗಿರುವ ‘ಇಂಡಿಯಾ’ ಒಕ್ಕೂಟದಿಂದ ದೂರ ಇರುವುದಾಗಿ ಪ್ರಕಟಿಸಿದರು. ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಎರಡು ಮೈತ್ರಿಕೂಟಗಳಿಂದ ಹೊರಗಿರುವ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ‌ ಮಾಡಿಕೊಳ್ಳಲು ಬಿಎಸ್‌ಪಿ ಮುಕ್ತವಾಗಿದೆ ಎಂದು ಮಾಯವತಿ ಹೇಳಿದರು. 

ADVERTISEMENT

ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳು ದಲಿತರು ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿಲ್ಲ ಎಂದು ಮಾಯಾವತಿ ಆರೋಪಿಸಿದರು.‌‌

ಕಾಂಗ್ರೆಸ್ ಜಾತಿವಾದಿ ಮನಸ್ಥಿತಿ ಅಳವಡಿಸಿಕೊಂಡಿದೆ ಮತ್ತು ದಲಿತರ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿದೆ, ಬಿಜೆಪಿ ಕೂಡ ಜಾತಿವಾದಿ ಮತ್ತು ಬಂಡವಾಳಶಾಹಿ ಮನಸ್ಥಿತಿ ಹೊಂದಿದೆ. ಈ ಕಾರಣಕ್ಕೆ ತುಳಿತಕ್ಕೊಳಗಾದ ಸಮುದಾಯಗಳು ಬಿಎಸ್‌ಪಿಯನ್ನು ಬೆಂಬಲಿಸಬೇಕು ಎಂದರು. 

ಕಾಂಗ್ರೆಸ್‌ ಪಕ್ಷ ಬಡವರು ಮತ್ತು ತುಳಿತಕ್ಕೊಳಗಾದವರ ಪರವಾಗಿ ಕೆಲಸ ಮಾಡಿದ್ದರೆ ಹಾಗೂ ಅಂಬೇಡ್ಕರ್ ಮಾತು ಪಾಲಿಸಿದ್ದರೇ ಬಿಎಸ್‌ಪಿ ರಚಿಸುವ ಅಗತ್ಯ ಇರುತ್ತಿರಲಿಲ್ಲ ಎಂದು ಮಾಯಾವತಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.