ನವದೆಹಲಿ: ಸುದ್ದಿ ಪೋರ್ಟಲ್ ‘ದ ಕ್ವಿಂಟ್’ನ ಸಂಸ್ಥಾಪಕ ರಾಘವ ಬಹಲ್ ಅವರ ನೊಯ್ಡಾದಲ್ಲಿರುವ ಮನೆ ಮತ್ತು ಅವರಿಗೆ ಸೇರಿದ ಇತರ ಸ್ಥಳಗಳಲ್ಲಿ ಆದಾಯ ತೆರಿಗೆ (ಐ.ಟಿ.) ಅಧಿಕಾರಿಗಳು ಶೋಧ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿ ಈ ಶೋಧ ನಡೆದಿದೆ.
ತನಿಖೆ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆದಿದೆ. ಇತರ ಕೆಲವರಿಗೆ ಸೇರಿದ ಸ್ಥಳಗಳಲ್ಲಿಯೂ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ರೀತು ಕಪೂರ್ ಅವರ ಡಿಜಿಟಲ್ ಸಾಧನಗಳಲ್ಲಿದ್ದ ದತ್ತಾಂಶದ ಪ್ರತಿ ಪಡೆದುಕೊಳ್ಳಲು ಐ.ಟಿ. ಅಧಿಕಾರಿಗಳು ಯತ್ನಿಸಿದ್ದಾರೆ. ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಕಾನೂನುಗಳು ಏನು ಮತ್ತು ಪತ್ರಕರ್ತೆಯಾಗಿ ಸಂಗ್ರಹಿಸಿದ ಮಾಹಿತಿ ಮತ್ತು ವೈಯಕ್ತಿಕ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಳ್ಳಬಹುದೇ ಎಂದು ರೀತೂ ಕೂಗಿ ಕೇಳಿದರು. ಆಗ ನಾನು ಅವರ ಮನೆಯ ಹೊರಗೆ ಇದ್ದೆ. ಐ.ಟಿ.ಯ ಇಬ್ಬರು ಅಧಿಕಾರಿಗಳು ರೀತೂ ಅವರನ್ನು ಮನೆಯೊಳಕ್ಕೆ ಎಳೆದುಕೊಂಡರು’ ಎಂದು ‘ದ ಕ್ವಿಂಟ್’ನ ಸಹ ಸಂಪಾದಕಿ ಪೂನಮ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.
ರೀತೂ ಅವರು ‘ದ ಕ್ವಿಂಟ್’ನ ಸಹ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ.ಐ.ಟಿ. ಅಧಿಕಾರಿಗಳು ‘ದ ಕ್ವಿಂಟ್’ ಕಚೇರಿ ಮತ್ತು ಅದರ ಸಂಸ್ಥಾಪಕರ ನಿವಾಸದಲ್ಲಿ ನಡೆಸಿದ ಶೋಧದ ಬಗ್ಗೆ ಭಾರತೀಯ ಸಂಪಾದಕರ ಕೂಟ (ಇಜಿಐ) ಕಳವಳ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.