ಶ್ರೀನಗರ: ಭಾರತ ಹಾಗೂ ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯು ಸೇನಾ ಕಾರ್ಯಾಚರಣೆಯಿಂದ ಶಮನಗೊಳ್ಳದು, ಪ್ರದೇಶದಲ್ಲಿ ಶಾಂತಿ ನೆಲೆಗೊಳ್ಳಲು ರಾಜಕೀಯ ಮಾತುಕತೆಯೇ ಪರಿಹಾರ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಭಯ ರಾಷ್ಟ್ರಗಳು ಸಂಯಮ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ನಡೆಯುತ್ತಿರುವ ಪರಸ್ಪರ ದಾಳಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಪುಲ್ವಾಮಾ ಹಾಗೂ ಪಹಲ್ಗಾಮ್ ಘಟನೆಯ ಬಳಿಕ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದು ಹೀಗೆ ಮುಂದುವರಿದರೆ, ಇಡೀ ಜಗತ್ತಿಗೆ ಅಪಾಯ. ಕಾರ್ಗಿಲ್, ಪುಲ್ವಾಮಾ, ಪಹಲ್ಗಾಮ್ ಅಥವಾ ಪಠಾಣ್ಕೋಟ್ ಆಗಿರಲಿ, ಸೇನಾ ಕಾರ್ಯಾಚರಣೆ ನಡೆದಾಗೆಲ್ಲಾ ರೋಗ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಿದಂತಾಗಿದೆ. ಆದರೆ ನೈಜ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಶಾಶ್ವತ ಶಾಂತಿ ನಿರ್ಮಾಣವೂ ಸಾಧ್ಯವಾಗಿಲ್ಲ’ ಎಂದು ಮೆಹಬೂಬಾ ಹೇಳಿದ್ದಾರೆ.
‘ನಮ್ಮ ದೇಶ ವಿಶ್ವದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಪಾಕಿಸ್ತಾನದ ಆಂತರಿಕ ಪರಿಸ್ಥಿತಿ ಸರಿಯಾಗಿಲ್ಲ. ಹೀಗಾಗಿ ಉಭಯ ರಾಷ್ಟ್ರಗಳು ರಾಜಕೀಯ ಮಧ್ಯಸ್ಥಿಕೆಗೆ ಪ್ರಯತ್ನಿಸಬೇಕು. ಸೇನಾ ಕಾರ್ಯಾಚರಣೆಯಿಂದ ಸಾಧಿಸುವುದು ಏನೂ ಇಲ್ಲ’ ಎಂದು ಹೇಳಿದ್ದಾರೆ.
ಎರಡೂ ಕಡೆಯ ಗಡಿಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ. ಉದ್ವಿಗ್ನತೆಯನ್ನು ಶಮನಗೊಳಿಸುವ ತುರ್ತು ಅಗತ್ಯ ಇದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಜನರು ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ. ಮಹಿಳೆಯರು, ಮಕ್ಕಳು ಸೇರಿ ಹಲವರ ಜೀವ ಹಾನಿಯಾಗಿದೆ. ಸಂಯಮ ಪಾಲಿಸುವ ತುರ್ತು ಅವಶ್ಯಕತೆಯಿದೆ. ಪರಿಸ್ಥಿತಿಯನ್ನು ಶಾಂತಗೊಳಿಸುವುದು ತಕ್ಷಣದ ಅಗತ್ಯವಾಗಿದೆ. ಎರಡೂ ದೇಶಗಳ ನಾಯಕತ್ವವು ಮನಸ್ಸು ಮಾಡಬೇಕು. ಪರಿಸ್ಥಿತಿಯನ್ನು ಶಮನಗೊಳಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.