ADVERTISEMENT

ಶ್ರದ್ಧಾ ಹತ್ಯೆ: ತಲೆಬುರುಡೆಯ ಭಾಗ, ಹರಿತ ಆಯುಧ ಪತ್ತೆ

ಮೆಹ್ರೌಲಿ ಕೆರೆ ಖಾಲಿ ಮಾಡಲು ಮುಂದಾದ ಪೊಲೀಸರು

ಪಿಟಿಐ
Published 26 ನವೆಂಬರ್ 2022, 11:31 IST
Last Updated 26 ನವೆಂಬರ್ 2022, 11:31 IST
ಆಫ್ತಾಬ್ ಅಮೀನ್ ಪೂನಾವಾಲಾ
ಆಫ್ತಾಬ್ ಅಮೀನ್ ಪೂನಾವಾಲಾ   

ನವದೆಹಲಿ: ಕಾಲ್ ಸೆಂಟರ್ ಉದ್ಯೋಗಿ ಶ್ರದ್ಧಾ ವಾಲಕರ್ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರಮನುಷ್ಯನ ತಲೆಬುರುಡೆಯ ಕೆಳಭಾಗ, ಕೆಳದವಡೆ ಹಾಗೂ ಮತ್ತಷ್ಟು ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಭಾಗಗಳು ಶ್ರದ್ಧಾಳದ್ದೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಆಕೆಯ ತಂದೆಯ ಡಿಎನ್ಎ ಮಾದರಿಗಳೊಂದಿಗೆ ಹೊಂದುತ್ತವೆಯೇ ಎಂಬುದನ್ನು ದೃಢೀಕರಿಸಲು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ಹೇಳಿದ್ದನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಛತ್ತರ್‌ಪುರದ ಅರಣ್ಯ ಪ್ರದೇಶ ಸೇರಿದಂತೆ, ಆಫ್ತಾಬ್ಅಮೀನ್ ಪೂನಾವಾಲಾ ಮತ್ತು ಶ್ರದ್ಧಾ ವಾಸಿಸುತ್ತಿದ್ದ ಸ್ಥಳ ಹಾಗೂ ದೆಹಲಿ ನಗರದಲ್ಲಿ ದೆಹಲಿ ಪೊಲೀಸರು ಮತ್ತೊಮ್ಮೆ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.

ADVERTISEMENT

ಆಯುಧ ಪತ್ತೆ:

ಆಫ್ತಾಬ್‌ನ ಛತ್ತರ್‌ಪುರ ಫ್ಲ್ಯಾಟ್‌ನಿಂದ ಶನಿವಾರ ಪೊಲೀಸರು ದೊಡ್ಡದಾದ, ಹರಿತವಾದ ಕತ್ತರಿಸುವ ಉಪಕರಣವೊಂದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಆರೋಪಿಯು ಶ್ರದ್ಧಾಳ ದೇಹ ಕತ್ತರಿಸಲು ಬಳಸಿರಬಹುದು ಎಂದು ಶಂಕಿಸಲಾಗಿದೆ.

ಸಾಕ್ಷ್ಯ ಮುಚ್ಚಿಟ್ಟ ಆರೋಪಿ: ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಿದ್ದಾಗಿ ಆರೋಪಿ ಆಫ್ತಾಬ್ ಪೊಲೀಸರು ಎದುರು ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ಹತ್ಯೆಯ ನಂತರ ದೊರೆತ ಶ್ರದ್ಧಾಳ ಮೂರು ಚಿತ್ರಗಳನ್ನು ನಾಶಪಡಿಸಿದ್ದಾಗಿಯೂ ಹೇಳಿದ್ದಾನೆ.

ಪೊಲೀಸರು ಕಟ್ಟುನಿಟ್ಟಿನ ವಿಚಾರಣೆ ಆರಂಭಿಸಿದ್ದು ಆರೋಪಿಯು ನಿಧಾನವಾಗಿ ಸತ್ಯವನ್ನು ಬಹಿರಂಗಪಡಿಸುತ್ತಿದ್ದಾನೆ. ಛತ್ತರ್‌ಪುರದ ತನ್ನ ಫ್ಲ್ಯಾಟ್‌ನಿಂದ ಪ್ರಮುಖ ಸಾಕ್ಷ್ಯವನ್ನು ಪಡೆಯಲು ಪೊಲೀಸರಿಗೆ ನೆರವಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರದ್ಧಾಳ ರಕ್ತದ ಬಟ್ಟೆಗಳನ್ನು ಕಸದ ವ್ಯಾನ್‌ಗೆ ವಿಲೇವಾರಿ ಮಾಡಿದ್ದಾಗಿಯೂ ಆರೋಪಿ ಮಾಹಿತಿ ನೀಡಿದ್ದಾನೆ. ‌

ಕೆರೆಯಲ್ಲಿ ತಲೆಬುರುಡೆ?: ಈ ನಡುವೆ, ಶ್ರದ್ಧಾಳ ತಲೆಬುರುಡೆಯನ್ನು ದೆಹಲಿಯ ಮೆಹ್ರೌಲಿ ಕೆರೆಗೆ ಎಸೆದಿರುವುದಾಗಿ ಆಫ್ತಾಬ್ ಪೊಲೀಸರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಭಾನುವಾರ ದೆಹಲಿ ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಪೊಲೀಸರು ಮೆಹ್ರೌಲಿ ಕೆರೆಯನ್ನು ಖಾಲಿ ಮಾಡುವ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬ್ಯಾಗ್ ಪತ್ತೆ: ಆಫ್ತಾಬ್‌ನ ಛತ್ತರ್‌ಪುರದ ಫ್ಲ್ಯಾಟ್‌ನಿಂದ ಶ್ರದ್ಧಾಳ ಬ್ಯಾಗ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಕೆಲವು ಬಟ್ಟೆಗಳು ಮತ್ತು ಶೂಗಳು ಪತ್ತೆಯಾಗಿವೆ. ಎರಡು ದೊಡ್ಡ ಕಪ್ಪು ಬ್ಯಾಗ್‌ಗಳೊಂದಿಗೆ ಪೊಲೀಸರು ಆರೋಪಿಯ ಫ್ಲ್ಯಾಟ್‌ನಿಂದ ಹೊರಬಂದರು ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.