ಕೋಲ್ಕತ್ತ: ಏಷ್ಯಾದ ಅತಿದೊಡ್ಡ ಕೆಂಪುದೀಪ ಪ್ರದೇಶವಾದ ಸೋನಾಗಚ್ಚಿಯ ಲೈಂಗಿಕ ಕಾರ್ಯಕರ್ತೆಯರ ಮಾನಸಿಕ ಸ್ಥಿತಿಗತಿ ತಿಳಿಯಲು, ಅಲ್ಲಿನ ಆರು ಲೈಂಗಿಕ ಕಾರ್ಯಕರ್ತೆಯರ ತಂಡಕ್ಕೆ ವೃತ್ತಿಪರ ಮನೋವೈದ್ಯರಿಂದ ತರಬೇತಿ ಕೊಡಿಸಲಾಗುತ್ತಿದೆ.
ದರ್ಬಾರ್ ಮಹಿಳಾ ಸಮನ್ವಯ ಸಮಿತಿ ಹಾಗೂ ಸ್ವಯಂಸೇವಾ ಸಂಸ್ಥೆ ಸೇರಿ ಇದೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ರೂಪಿಸಿವೆ. ಇದರಿಂದ ಲೈಂಗಿಕ ಕಾರ್ಯಕರ್ತೆಯರಲ್ಲಿರುವ ಖಿನ್ನತೆ, ಮಾನಸಿಕ ಅನಾರೋಗ್ಯದ ಬಗ್ಗೆ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ.
ತಂಡದ ಸದಸ್ಯರು ಮಾನಸಿಕ ಅನಾರೋಗ್ಯದ ಲಕ್ಷಣಗಳಿರುವ ಕಾರ್ಯಕರ್ತೆಯರನ್ನು ಗುರುತಿಸಿ ಅವರಿಗೆ ಶೀಘ್ರ ಆಪ್ತ ಸಮಾಲೋಚನೆ ಕೊಡಿಸಲು ನೆರವಾಗಲಿದ್ದಾರೆ.
‘ಪಿ.ಆರ್ ಕೌನ್ಸೆಲರ್ಗಳು’ ಎಂದು ಕರೆಯಲಾಗುವ ಈ ಸದಸ್ಯರು, ಗರಿಷ್ಠ ಸಂಖ್ಯೆಯ ಸಹೋದ್ಯೋಗಿಗಳೊಂದಿಗೆ ಮುಖಾಮುಖಿ ಸಂಭಾಷಣೆ ನಡೆಸಲಿದ್ದಾರೆ.
‘ಲೈಂಗಿಕ ಕಾರ್ಯಕರ್ತೆಯರು ಬಹಳಷ್ಟು ಕಿರುಕುಳ ಮತ್ತು ಶೋಷಣೆ ಎದುರಿಸುತ್ತಿದ್ದಾರೆ. ಕೆಲವೊಮ್ಮೆ ಇದು ತೀವ್ರವಾದಾಗ ಖಿನ್ನತೆ, ಮಾನಸಿಕ ಯಾತನೆ ಮತ್ತು ಆತ್ಮಹತ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಅವರ ಮಾನಸಿಕ ಆರೋಗ್ಯದ ಸಂಪೂರ್ಣ ಮಾಹಿತಿ ಪಡೆದು ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದೇವೆ’ ಎಂದು ಸೋನಾಗಚ್ಚಿ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎಸ್ಆರ್ಟಿಐ) ಮುಖ್ಯಸ್ಥ ಸಮರ್ಜಿತ್ ಜನಾ ತಿಳಿಸಿದ್ದಾರೆ.
‘ನೋಟು ಅಮಾನ್ಯೀಕರಣದಿಂದ ಈ ಮಹಿಳೆಯರು ಬಹಳಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದಾರೆ. ಬಾಲ್ಯದಲ್ಲಿ ಕುಟುಂಬದವರಿಂದ ಲೈಂಗಿಕ ಶೋಷಣೆ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವ ಭೀತಿ ಮುಂತಾದ ಕಾರಣಗಳು ಅವರನ್ನು ಖಿನ್ನತೆಗೆ ದೂಡುತ್ತವೆ’ ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.