ADVERTISEMENT

MGNREGS ಕೆಲಸದ ದಿನಗಳು 150ಕ್ಕೆ,ವೇತನ ₹400ಕ್ಕೆ ಹೆಚ್ಚಿಸಲು ಸಮಿತಿ ಒತ್ತಾಯ

ಪಿಟಿಐ
Published 13 ಏಪ್ರಿಲ್ 2025, 12:50 IST
Last Updated 13 ಏಪ್ರಿಲ್ 2025, 12:50 IST
   

ನವದೆಹಲಿ: ಮಹಾತ್ವ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ(ಎಂಜಿಎನ್‌ಆರ್‌ಇಜಿಎಸ್) ಪರಿಣಾಮಕಾರಿತ್ವದ ಬಗ್ಗೆ ಸ್ವತಂತ್ರ ಸಮೀಕ್ಷೆ ನಡೆಸಬೇಕು ಎಂದು ಸಂಸದೀಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದ್ದು, ಇತ್ತೀಚೆಗೆ ಉದ್ಭವಿಸುತ್ತಿರುವ ಹೊಸ ಹೊಸ ಸವಾಲುಗಳನ್ನು ಪರಿಗಣಿಸಿ ಯೋಜನೆಯ ಪರಿಷ್ಕರಣೆಗೆ ಸಲಹೆ, ಒತ್ತಾಯ ಮಾಡಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಸಮಿತಿ ವರದಿಯನ್ನು ಮಂಡಿಸಲಾಗಿದೆ. ಈ ವರದಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಂಬಂಧಿತ ಸಂಸದೀತ ಸ್ಥಾಯಿ ಸಮೀತಿಯು, ಯೋಜನೆಯಡಿ ಈಗ ಇರುವ 100 ದಿನಗಳ ಕೆಲಸದ ಅವಧಿಯನ್ನು 150ಕ್ಕೆ ಹೆಚ್ಚಿಸಬೇಕು ಮತ್ತು ದಿನದ ವೇತನವನ್ನು ₹400ಕ್ಕೆ ಹೆಚ್ಚಿಸಬೇಕೆಂದು ಶಿಫಾರಸು ಮಾಡಿದೆ.

ಪ್ರಮುಖ ಗ್ರಾಮೀಣ ಉದ್ಯೋಗ ಯೋಜನೆಗೆ ಅನುದಾನ ಹಂಚಿಕೆ ಸ್ಥಗಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಮಿತಿಯು, ಅದರ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಲೆಕ್ಕಪರಿಶೋಧನೆಯ ಬಗ್ಗೆಯೂ ಒತ್ತಿ ಹೇಳಿದೆ.

ADVERTISEMENT

ಯೋಜನೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಸಮಗ್ರ ರಾಷ್ಟ್ರೀಯ ಸಮೀಕ್ಷೆಯನ್ನು ನಡೆಸಬೇಕು ಎಂದು ಸಮಿತಿ ನಂಬುತ್ತದೆ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಕಾ ನೇತೃತ್ವದ ಸಮಿತಿ ಹೇಳಿದೆ.

ಸಮೀಕ್ಷೆಯು ಕಾರ್ಮಿಕರ ತೃಪ್ತಿ, ವೇತನ ವಿಳಂಬ, ಭಾಗವಹಿಸುವಿಕೆಯ ಪ್ರವೃತ್ತಿಗಳು ಮತ್ತು ಯೋಜನೆಯೊಳಗಿನ ಹಣಕಾಸಿನ ಅಕ್ರಮಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಅದು ಹೇಳಿದೆ.

ಯೋಜನೆ ಕುರಿತಂತೆ ಮೌಲ್ಯಯುತ ಒಳನೋಟವನ್ನು ಪಡೆಯಲು ದೇಶದಾದ್ಯಂತ ಸ್ವತಂತ್ರ ಮತ್ತು ಪಾರದರ್ಶಕ ಸಮಗ್ರ ಸಮೀಕ್ಷೆಗೆ ಸಮಿತಿ ಒತ್ತಾಯಿಸಿದೆ. ಯೋಜನೆಯ ಪರಿಣಾಮಕತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀತಿ ಪರಿಷ್ಕರಣೆಗೂ ಸಮಿತಿ ಒತ್ತಾಯಿಸಿದೆ.

ಬದಲಾದ ಸನ್ನಿವೇಶ ಮತ್ತು ಹೊಸ ಹೊಸ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಪರಿಷ್ಕರಿಸುವ ಅಗತ್ಯವಿದೆ. ಈಗಿರುವ 100 ದಿನಗಳ ಕೆಲಸದ ಅವಧಿಯನ್ನು 150ಕ್ಕೆ ಹೆಚ್ಚಿಸುವ ಆಯ್ಕೆಗಳನ್ನು ಪರಿಶೀಲಿಸುವಂತೆ ಸಚಿವಾಲಯಕ್ಕೆ ಸಮಿತಿ ಒತ್ತಾಯಿಸಿದೆ.

ವಿಪತ್ತು ಪರಿಹಾರದ ಕ್ರಮವಾಗಿ ಯೋಜನೆಯಡಿ ಸದ್ಯ ಇರುವ 150 ದಿನಗಳ ಕೆಲಸದ ಅವಧಿಯನ್ನು 200ಕ್ಕೆ ಹೆಚ್ಚಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.

ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹೆಚ್ಚಳ ಆಗದಿರುವ ಬಗ್ಗೆ ಸಮಿತಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಸದ್ಯದ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಕೂಲಿಯನ್ನು ಪರಿಷ್ಕರಿಸಬೇಕು. ₹400 ಗೌರವಾನ್ವಿತ ಕೂಲಿ ನೀಡಬೇಕು ಎಂದೂ ಹೇಳಿದೆ.

ವೇತನ ಬಿಡುಗಡೆಯಲ್ಲಿ ದೀರ್ಘ ವಿಳಂಬವಾಗುತ್ತಿದ್ದು, ವಿಳಂಬಕ್ಕೆ ಪರಿಹಾರ ಸಹ ನೀಡಬೇಕು ಎಂದು ಹೇಳಿದೆ.

ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸಲು ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಹೆಚ್ಚಿಸಬೇಕು ಎಂದು ಸಮಿತಿಯು ಗಮನಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಾಮಾಜಿಕ ಲೆಕ್ಕಪರಿಶೋಧನಾ ಕ್ಯಾಲೆಂಡರ್ ಅನ್ನು ತರಲು ಒತ್ತಾಯಿಸಿದೆ.

ಹೆಚ್ಚಿನ ಸಂಖ್ಯೆಯ ಉದ್ಯೋಗ ಕಾರ್ಡ್ ರದ್ದನ್ನು ಗಮನಿಸಿದ ಸಮಿತಿಯು, 2021-22ರಲ್ಲಿ ಆಧಾರ್ ವಿವರಗಳಲ್ಲಿನ ಸಣ್ಣ ಕಾಗುಣಿತ ದೋಷಗಳು ಅಥವಾ ಹೊಂದಾಣಿಕೆಯಿಲ್ಲದ ಕಾರಣ ಸುಮಾರು 50.31 ಲಕ್ಷ ಉದ್ಯೋಗ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.