
ಸತ್ಯ ನಾದೆಲ್ಲಾ
ಬೆಂಗಳೂರು: ಏಷ್ಯಾದಲ್ಲೇ ಅತಿ ದೊಡ್ಡ ಹೂಡಿಕೆಯಾದ 17.5 ಶತಕೋಟಿ ಡಾಲರ್ (₹1.57 ಲಕ್ಷ ಕೋಟಿ) ಮೂಲಕ, ಭಾರತದ ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಮೈಕ್ರೊಸಾಫ್ಟ್ನ ಬದ್ಧತೆ ಮತ್ತಷ್ಟು ಬಲಗೊಂಡಿದೆ’ ಎಂದು ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಹೇಳಿದರು.
ಇಲ್ಲಿ ನಡೆದ ಮೈಕ್ರೊಸಾಫ್ಟ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎ.ಐ ಆಧಾರಿತ ಕ್ಷೇತ್ರದಲ್ಲಿ ಲಕ್ಷಾಂತರ ಜನರಿಗೆ ಕೌಶಲ ತರಬೇತಿ ನೀಡುವ ಮೂಲಕ ಮೈಕ್ರೊಸಾಫ್ಟ್, ಭಾರತದ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲೂ ಹೊಸ ಹೆಜ್ಜೆಗುರುತುಗಳನ್ನು ಮೂಡಿಸಲಿದೆ’ ಎಂದರು.
‘ಭಾರತದಲ್ಲಿ ಸ್ವಾಯತ್ತ ಎಐ ವ್ಯವಸ್ಥೆ ‘ಏಜೆಂಟ್– ಎಐ’ ಜಾರಿಯ ವೇಗವನ್ನು ಹೆಚ್ಚಿಸಲು ಮಾಹಿತಿ ತಂತ್ರಜ್ಞಾನ ವಲಯದ ಪ್ರಮುಖ ನಾಲ್ಕು ಕಂಪನಿಗಳಾದ ಕಾಗ್ನಿಜೆಂಟ್, ಇನ್ಫೊಸಿಸ್, ಟಿಸಿಎಸ್ ಮತ್ತು ವಿಪ್ರೊ ಜತೆಗೆ ಮಹತ್ವದ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಎಐ ಮಾರುಕಟ್ಟೆ ವಿಸ್ತರಣೆಗಾಗಿ ಪ್ರತಿ ಕಂಪನಿಯು ತಲಾ 50 ಸಾವಿರ ಮೈಕ್ರೊಸಾಫ್ಟ್ ಕೋಪೈಲಟ್ ಪರವಾನಗಿ ನಿಯೋಜನೆ ಮಾಡಿಕೊಳ್ಳಲಿವೆ. ಈ ಪಾಲುದಾರಿಕೆಯಿಂದ ಕಂಪನಿಗಳ ಉತ್ಪಾದನಾ ಸಾಮರ್ಥ್ಯ, ದಕ್ಷತೆ ಹೆಚ್ಚಲಿದೆ’ ಎಂದರು.
‘ಮೈಕ್ರೊಸಾಫ್ಟ್ನ ಕ್ಲೌಡ್ ಕಂಪ್ಯೂಟಿಂಗ್ ವೇದಿಕೆಯಾದ ‘ಅಜೂರ್’ ಅನ್ನು ನಾವು ಜಗತ್ತಿನ ಕಂಪ್ಯೂಟರ್ ಆಗಿ ಬದಲಾಯಿಸುತ್ತೇವೆ. ಕ್ಲೌಡ್ ಸೇವೆಗಳಿಗಾಗಿ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ 70 ಡೇಟಾ ಕೇಂದ್ರಗಳು ನಿರ್ಮಾಣವಾಗಲಿವೆ. ಸದ್ಯ ನಾವು, ದಕ್ಷಿಣ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಮಾರುಕಟ್ಟೆ ಹೊಂದಿದ್ದು, ಶೀಘ್ರದಲ್ಲೇ ರಿಲಯನ್ಸ್ ಜಿಯೊ ಜತೆಗೂ ಪಾಲುದಾರಿಕೆ ಘೋಷಿಸಲಿದ್ದೇವೆ. ಭಾರತದಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಡೇಟಾ ಕೇಂದ್ರವು 2026ರಲ್ಲಿ ಕಾರ್ಯಾಚರಣೆ ಆರಂಭಿಸಲಿದೆ’ ಎಂದು ತಿಳಿಸಿದರು.
ಇ–ಶ್ರಮ: ಭಾರತದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರಿಗೆ ಎಐ ಆಧಾರಿತ ಕೌಶಲ ತರಬೇತಿ ನೀಡಲಾಗುವುದು. ಅಸಂಘಟಿತ ವಲಯದ ಕಾರ್ಮಿಕರನ್ನು ಎಐ ಮೂಲಕ ಹೇಗೆ ಮೇಲೆತ್ತಬಹುದು ಎನ್ನುವುದಕ್ಕೆ ಸರ್ಕಾರದ ‘ಇ–ಶ್ರಮ’ ಕಾರ್ಯಕ್ರಮ ಉತ್ತಮ ಉದಾಹರಣೆಯಾಗಿದೆ ಎಂದು ನಾದೆಲ್ಲಾ ಹೇಳಿದರು.
‘ಡಿಜಿಟಲ್ ಸಾರ್ವಭೌಮತ್ವ ಮುಖ್ಯ’
ಎಐ ಬೆಳೆದಂತೆ ರಾಷ್ಟ್ರಗಳು ತಮ್ಮ ಡೇಟಾ ಮೇಲೆ ಸಂಪೂರ್ಣ ನಿಯಂತ್ರಣ ಮತ್ತು ಬಲವಾದ ಸೈಬರ್ ಸುರಕ್ಷತೆ ಖಾತರಿಪಡಿಸಿಕೊಳ್ಳುವುದು (ಡಿಜಿಟಲ್ ಸಾರ್ವಭೌಮತ್ವ) ಬಹು ಮುಖ್ಯವಾಗಿದೆ. ‘ಅಜೂರ್’ ವೇದಿಕೆ ಇದನ್ನು ಬೆಂಬಲಿಸಲಿದೆ. 2030ರ ವೇಳೆಗೆ ಭಾರತವು ವೆಬ್ ಆಧಾರಿತ ವೇದಿಕೆ ‘ಗಿಟ್ಹಬ್’ ಮೂಲಕ ವಿಶ್ವದ ನಂ.1 ಸಮುದಾಯವಾಗಲಿದೆ ಎಂದು ನಾದೆಲ್ಲಾ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.