ADVERTISEMENT

ಒಡಿಶಾದಲ್ಲಿ ಗಣಿಗಾರಿಕೆ ಶೀಘ್ರ ಅನುಮತಿ

ಮಂದಾಕಿನಿ ಮತ್ತು ದುರ್ಗಾಪುರದಲ್ಲಿರುವ ಕಲ್ಲಿದ್ದಲು ಗಣಿಗಳು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 21:16 IST
Last Updated 28 ಆಗಸ್ಟ್ 2020, 21:16 IST
ಸಚಿವ ಪ್ರಲ್ಹಾದ ಜೋಶಿ
ಸಚಿವ ಪ್ರಲ್ಹಾದ ಜೋಶಿ   

ಬೆಂಗಳೂರು: ಒಡಿಶಾದ ಮಂದಾಕಿನಿ ಮತ್ತು ದುರ್ಗಾಪುರ ಕಲ್ಲಿದ್ದಲು ಗಣಿಗಳಲ್ಲಿ ಗಣಿಗಾರಿಕೆಗೆ ಆದಷ್ಟು ಬೇಗ ಅನುಮತಿ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೋರಿಕೆಗೆ ಜೋಶಿ ಸಕಾರಾತ್ಮಕವಾಗಿ ಸ್ಪಂದಿಸಿದರು.

ಇವೆರಡೂ ಕಲ್ಲಿದ್ದಲು ಗಣಿಗಳ ಗಣಿಗಾರಿಕೆಗೆ ಅನುಮತಿ ಕೋರಿ ಒಡಿಶಾ ಸರ್ಕಾರಕ್ಕೆ ರಾಜ್ಯ ಅರ್ಜಿಗಳನ್ನು ಸಲ್ಲಿಸಿದೆ. ಆದರೆ, ಕೇಂದ್ರ ಸರ್ಕಾರವು ಹೊಸದಾಗಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕ್ರಿಯೆ ಪೂರೈಸಿ ಗಣಿಗಾರಿಕೆಗೆ ಅನುಮತಿ ಸಿಗಬೇಕಾದರೆ ಕನಿಷ್ಠ ಎರಡು ವರ್ಷಗಳಷ್ಟು ತಡವಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಅನು ಮೋದನೆ ಕೊಡಿಸಬೇಕು ಎಂದು ಯಡಿಯೂರಪ್ಪ ಸಭೆಯಲ್ಲಿ ಮನವಿ ಮಾಡಿದರು. ಮಹಾರಾಷ್ಟ್ರದ ಬಾರಂಜಾ ಕಲ್ಲಿದ್ದಲು ಗಣಿಯಲ್ಲಿ ಕರ್ನಾಟಕಕ್ಕೆ ನಿಗದಿಯಾಗಿದ್ದ ಬ್ಲಾಕ್‌ನಲ್ಲಿ ಗಣಿಗಾರಿಕೆ ಮಾಡಲು ಸೂಚನೆ ನೀಡಲಾಗಿದೆ. ಆ ರಾಜ್ಯದ ಜತೆಗೆ ತಕರಾರು ಇದ್ದ ಕಾರಣ ಬಹಳ ಕಾಲದಿಂದ ಗಣಿಗಾರಿಕೆ ನಡೆಸಿರಲಿಲ್ಲ.ಈ ಮಧ್ಯೆ ಅಲ್ಲಿ ಕಲ್ಲಿದ್ದಲು ಕಳುವಾಗಿದ್ದರಿಂದ, ಕೇಂದ್ರ ಸರ್ಕಾರ ಕಲ್ಲಿದ್ದಲು ನಿಯಂತ್ರಕರ (ಕೋಲ್ ಕಂಟ್ರೋಲರ್) ಮೂಲಕ ಕಲ್ಲಿದ್ದಲು ಸಂಗ್ರಹದ ಮೌಲ್ಯಮಾಪನ ಮಾಡಿಸಲಾಗಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಬೇಕಿರುವ ರಾಯಧನ ನಿಗದಿಪಡಿಸಿ, ಕಲ್ಲಿದ್ದಿಲಿನ ವಿಲೇವಾರಿ ಪ್ರಕ್ರಿಯೆ ಮತ್ತು ಗಣಿಗಾರಿಕೆ ಪ್ರಾರಂಭಕ್ಕೆ ಅನುವು ಮಾಡಿಕೊಡಲು ಅಲ್ಲಿನ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

ADVERTISEMENT

ಅಲ್ಲದೆ, ಸಿಂಗರೇಣಿಯಿಂದ ಕರ್ನಾಟಕಕ್ಕೆ ಕಲ್ಲಿದ್ದಲು ಸಾಗಿಸುವಾಗ ಅದರ ಗುಣಮಟ್ಟದಲ್ಲಿ ವ್ಯತ್ಯಾಸ ಆಗುತ್ತಿತ್ತು. ದರ ಹೆಚ್ಚಳವಾಗಿದ್ದರಿಂದ ರಾಜ್ಯದ ಬೊಕ್ಕಸಕ್ಕೂ ನಷ್ಟವಾಗುತ್ತಿತ್ತು. ದರ ಇಳಿಸುವುದರ ಜತೆಗೆ, ಗುಣಮಟ್ಟ ವ್ಯತ್ಯಯ ಆಗದಂತೆ ನೋಡಿಕೊಳ್ಳುಕೊಳ್ಳುವಂತೆ ರಾಜ್ಯದ ಅಧಿಕಾರಿಗಳು ಸಭೆಯಲ್ಲಿ ಮನವಿ ಮಾಡಿದರು. ಈ ಸಂಬಂಧ ಕಲ್ಲಿದ್ದಲು ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕರ ಜತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಜೋಶಿ
ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಕಂದಾಯ ಸಚಿವ ಆರ್‌.ಅಶೋಕ, ಗಣಿ ಸಚಿವ ಸಿ.ಸಿ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.