ಏಲೂರು (ಆಂಧ್ರಪ್ರದೇಶ): ಇಲ್ಲಿನ ವೆಂಕಟಪುರಂ ಗ್ರಾಮದ ಬಾಲಕಿಯೊಬ್ಬಳು ಪೊಲೀಸ್ ಸಹಾಯವಾಣಿ ‘ದಿಶಾ’ಗೆ ಸಕಾಲಕ್ಕೆ ಕರೆ ಮಾಡಿದ ಕಾರಣ ಆಕೆಯ ಬಾಲ್ಯವಿವಾಹವು ರದ್ದುಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
‘ಬಾಲಕಿಯ ಮದುವೆಯನ್ನು ಮನೆಯ ಹಿರಿಯರು ಜೂನ್ 8ರಂದು ನಿಗದಿಪಡಿಸಿದ್ದರು. ಆದರೆ ಆಕೆಗೆ ಉನ್ನತ ಶಿಕ್ಷಣ ಪಡೆಯುವ ಹಂಬಲವಿತ್ತು. ಈ ಕಾರಣಕ್ಕೆ ಆಕೆ ಮದುವೆಗಿಂತ ಮೂರು ದಿನ ಮೊದಲು ಸಹಾಯವಾಣಿಗೆ ಕರೆ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾಳೆ’ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಲಕಿಯ ಕರೆ ಸ್ವೀಕರಿಸಿದ ಐದು ನಿಮಿಷದೊಳಗೆ ಪೊಲೀಸರು ಆಕೆಯ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಆಕೆ, ತನ್ನ ಇಚ್ಛೆಯ ವಿರುದ್ಧವಾಗಿ ಮದುವೆ ನಿಗದಿಪಡಿಸಲಾಗಿದೆ ಎಂದು ದೂರಿದ್ದಾಳೆ. ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮದುವೆಯಾಗುವುದಾಗಿಯೂ ಒಪ್ಪಿದ್ದಾಳೆ. ಬಳಿಕ ಆಕೆಯ ಪೋಷಕರ ಮನವೊಲಿಸಿ ಮದುವೆಯನ್ನು ರದ್ದುಗೊಳಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.