ADVERTISEMENT

ಗಂಗೆ ಉಳಿಸಿ ಎಂದ ಸಂತ ಗೋಪಾಲ್ ದಾಸ್ ಮತ್ತು ಸಹಚರರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 11:19 IST
Last Updated 17 ಜನವರಿ 2019, 11:19 IST
   

ನವದೆಹಲಿ: ‘ಗಂಗೆಯೂ ಶುದ್ಧವಾಗುತ್ತಿಲ್ಲ, ಗಂಗೆಯನ್ನು ಶುಚಿಯಾಗಿಡಿ ಎಂದು ಒತ್ತಾಯಿಸಿದ ಹೋರಾಟಗಾರರೂ ಕಾಣಿಸುತ್ತಿಲ್ಲ...’

ಗಂಗಾನದಿ ಮಲಿನಮುಕ್ತ ಆಗಬೇಕು, ಶುಭ್ರ ನದಿ ಅಡೆತಡೆ ಇಲ್ಲದೆ ಹರಿಯಬೇಕುಎಂದು ಒತ್ತಾಯಿಸುವ ಹೋರಾಟ ಪ್ರಬಲವಾಗಿರುವಉತ್ತರಖಂಡದ ಹೃಷೀಕೇಶದಲ್ಲಿ ಈ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಮಾತಿಗೆ ಪುಷ್ಟಿ ಕೊಡುವಂತೆ ಗಂಗೆಯನ್ನು ಉಳಿಸಿ ಆಂದೋಲನದ ಸಂತ ಗೋಪಾಲ್ ದಾಸ್ ಮತ್ತು ಅವರ ಸಹಚರರು ಇದೀಗ ನಾಪತ್ತೆಯಾಗಿದ್ದಾರೆ.

‘ಗಂಗೆಯ ಮುಕ್ತ ಹರಿವಿಗೆ ತಡೆ ಇರಬಾರದು, ಗಂಗೆಯ ಮಾಲಿನ್ಯಕ್ಕೆ ಕಡಿವಾಣ ಹಾಕಬೇಕು’ ಎಂದುಒತ್ತಾಯಿಸಿಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಖ್ಯಾತ ಪರಿಸರ ಹೋರಾಟಗಾರ ಜಿ.ಡಿ.ಅಗರ್ವಾಲ್ ಹುತಾತ್ಮರಾದ ಕೆಲವೇ ತಿಂಗಳುಗಳಲ್ಲಿಮತ್ತೋರ್ವ ಸತ್ಯಾಗ್ರಹಿ ಸಂತ ಗೋಪಾಲ್ ದಾಸ್ ನಾಪತ್ತೆಯಾಗಿದ್ದಾರೆ.

ADVERTISEMENT

ಹರಿದ್ವಾರದ ‘ಮೈತ್ರಿಸದನ’ದಲ್ಲಿ 100 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ದಾಸ್, ಡೆಹ್ರಾಡೂನ್‌ನ ಡೂನ್‌ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೊನೆಯ ಬಾರಿಗೆ ಜನರ ಕಣ್ಣಿಗೆ ಬಿದ್ದಿದ್ದರು. ಚಿಕಿತ್ಸೆಗೆಂದು ಅವರನ್ನು ಡಿ.6ರಂದು ಹೃಷೀಕೇಶದಿಂದ ಡೆಹ್ರಾಡೂನ್‌ಗೆ ಕೊಂಡೊಯ್ಯಲಾಗಿತ್ತು. ದಾಸ್ ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರ ಇನ್ನಿಬ್ಬರು ಸಹಚರರೂ ನಾಪತ್ತೆಯಾಗಿರುವುದುಗಂಗಾ ಸಂರಕ್ಷಣೆ ಯೋಜನೆಗಳ ಹಿಂದಿರುವ ರಾಜಕಾರಣ ಮತ್ತು ಕಂಟ್ರಾಕ್ಟ್ ಮಾಫಿಯಾಗಳ ಬಗ್ಗೆ ಜನರಲ್ಲಿ ಶಂಕೆ ಹುಟ್ಟುಹಾಕಿದೆ.

ಉತ್ತರಖಂಡದಲ್ಲಿ ಗಂಗಾ ನದಿಯ ಸಂರಕ್ಷಣೆಗೆ ಆಗ್ರಹಿಸಿ ಸಾಧುಗಳು ನಡೆಸುತ್ತಿರುವ ಹೋರಾಟದಲ್ಲಿಯೂ ಇದೀಗ ರಾಜಕಾರಣ ಪ್ರವೇಶವಾಗಿರುವ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಹೋರಾಟ ಮುಂಚೂಣಿಯಲ್ಲಿದ್ದ ನಾಯಕರಾದಜಿ.ಡಿ.ಅಗರ್ವಾಲ್ ಸ್ವತಃ ಇಂಥ ಆರೋಪ ಮಾಡಿದ್ದರು. ಅಗರ್ವಾಲ್ ಮೃತಪಟ್ಟ ನಂತರ ಗಂಗಾ ಸಂರಕ್ಷಣೆ ಹೋರಾಟ ತುಸು ಕಳಾಹೀನವಾಗಿತ್ತು. ಈ ಹಂತದಲ್ಲಿ ಪ್ರವರ್ಧಮಾನಕ್ಕೆ ಬಂದವರು ಸಂತ ಗೋಪಾಲ ದಾಸ್.

‘ಗಂಗೆ ಉಳಿಸಿ’ ಹೋರಾಟಕ್ಕೆಜನಬೆಂಬಲ ಮತ್ತು ಗೋಪಾಲ ದಾಸ್ ಅನುಯಾಯಿಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾದ ನಂತರಉತ್ತರಖಂಡ ಸರ್ಕಾರವು ತನ್ನ ದೃಷ್ಟಿಯನ್ನು ದಾಸ್ ಅವರತ್ತ ಹರಿಸಿತು.

ಹೃಷೀಕೇಶದಲ್ಲಿ ಆಕ್ರೋಶ

ಉಪವಾಸ ಮಾಡಿ ಬಳಲಿದ್ದ ಅವರನ್ನು ಹೃಷೀಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಏಮ್ಸ್‌ನ ಓರ್ವ ಕಿರಿಯ ವೈದ್ಯರೊಂದಿಗೆ ಗೋಪಾಲ ದಾಸ್ ಜಗಳಮಾಡಿಕೊಂಡರು.‘ದಾಸ್‌ ವರ್ತನೆ ಅಸಹಜವವಾಗಿದೆ. ಇದರಿಂದ ಇತರ ರೋಗಿಗಳಿಗೂತೊಂದರೆಯಾಗುತ್ತಿದೆ’ ಎಂದು ಆ ವೈದ್ಯ ಆರೋಪವನ್ನೂ ಮಾಡಿದ್ದರು. ಆದರೆ ಏಕಾಏಕಿ ದಾಸ್ ಅಲ್ಲಿಂದ ನಾಪತ್ತೆಯಾದರು!

ಮಗನ ಸುರಕ್ಷತೆ ಬಗ್ಗೆ ಆತಂಕಗೊಂಡ ತಾಯಿ, ‘ಮಗನನ್ನು ಮನೆಗೆ ಕಳಿಸಿಕೊಡಿ’ ಎಂದು ಆಗ್ರಹಿಸಿಹೃಷೀಕೇಶದ ದತ್ತಾತ್ರೇಯ ಘಾಟ್‌ನಲ್ಲಿ ಉಪವಾಸ ಸತ್ಯಾಗ್ರಹಆರಂಭಿಸಿದರು.ದಾಸ್ ಅವರ ತಂದೆ ‘ಮಗ ಎಲ್ಲಿಗೆ ಹೋದ ತಿಳಿಸಿ’ ಎಂದು ಏಮ್ಸ್‌ ಆಡಳಿತ ಮಂಡಳಿಯನ್ನುಒತ್ತಾಯಿಸಿದಾಗ, ‘ದಾಸ್ ಎಲ್ಲಿದ್ದಾರೋ ನಮಗೆ ಗೊತ್ತಿಲ್ಲ’ ಎಂಬ ಉತ್ತರವಷ್ಟೇ ಬಂತು.

ಒತ್ತಡ ಹೆಚ್ಚಾದಾಗ ಏಮ್ಸ್‌ ನಿರ್ದೇಶಕ ರಣದೀಪ್ ಗುಲ್ನೇರಿಯಾ, ‘ದಾಸ್ ಅವರುಡಿಸ್‌ಚಾರ್ಜ್ ಮಾಡುವಂತೆ ಕೋರಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಕಳುಹಿಸಿಕೊಡಲಾಯಿತು’ಎಂದು ಕುಟುಂಬದ ಸದಸ್ಯರಿಗೆ ತಿಳಿಸಿದರು. ಇಷ್ಟಾದ ನಂತರವೂ ದಾಸ್‌ ಪತ್ತೆಯಾಗಲಿಲ್ಲ.

ಹೃಷೀಕೇಶದಿಂದ ಡೆಹ್ರಾಡೂನ್‌ಗೆ

ಹೃಷೀಕೇಶದ ಏಮ್ಸ್‌ ಆಸ್ಪತ್ರೆಯ ವಾಹನವೊಂದು ದಾಸ್ ಅವರನ್ನು ಡೆಹ್ರಾಡೂನ್‌ಗೆ ಹೊತ್ತು ತಂದುಜಿಲ್ಲಾಧಿಕಾರಿ ಮನೆಯ ಎದುರು ಇಳಿಸಿ ಹೋಯಿತು. ವಾಹನದಿಂದ ಕೆಳಗಿಳಿಯುವಾಗದಾಸ್ ಅವರಮೂಗಿನಿಂದ ರಕ್ತ ಸುರಿಯುತ್ತಿತ್ತು. ನಿತ್ರಾಣ ಸ್ಥಿತಿಯಲ್ಲಿದ್ದ ಅವರು ಗೆಳೆಯನೊಬ್ಬನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು, ಅವನ ನೆರವಿನಿಂದಮ್ಯಾಕ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿನ ವೈದ್ಯರುಚಿಕಿತ್ಸೆ ಕೊಡಲು ಹಿಂಜರಿದರು. ನಂತರ ಡೂನ್‌ ಸರ್ಕಾರಿ ಆಸ್ಪತ್ರೆಗೆ ತೆರಳಿದ ಅವರು, ಅಲ್ಲಿಂದಲೇ ನಾಪತ್ತೆಯಾದರು.

ಡೂನ್‌ ಆಸ್ಪತ್ರೆಯ ಆಡಳಿತ ಮಂಡಳಿಯೇನೋ ದಾಸ್ ತಾವಾಗಿಯೇ ಇಲ್ಲಿಂದ ಹೊರಗೆ ಹೋಗಿದ್ದಾರೆ. ನಾವುಸಿಸಿಟಿಸಿ ಫೂಟೇಜ್ ನೋಡಿದ್ದೇವೆ ಎನ್ನುತ್ತಿದೆ. ಆದರೆಆ ಫೂಟೇಜ್‌ ನೋಡಲು ಬೇರೆ ಯಾರಿಗೂ ಅವಕಾಶ ಮಾಡಿಕೊಡುತ್ತಿಲ್ಲ.

ಎಲ್ಲಿದ್ದಾರೆ ಗೋಪಾಲ ದಾಸ್?

ಗೋಪಾಲ್‌ ದಾಸ್ ಅವರನ್ನು ಹಾಜರುಪಡಿಸಿ ಎಂದು ದೆಹಲಿಹೈಕೋರ್ಟ್ ತೀರ್ಪು ನೀಡಿದ ನಂತರವೂಪೊಲೀಸರು ಹೆಚ್ಚೇನೂ ಶ್ರಮ ಹಾಕಲಿಲ್ಲ. ದಾಸ್ ಅವರ ಗೆಳೆಯ ಆಚಾರ್ಯ ರವೀಂದ್ರ ಅವರ ಹೇಳಿಕೆ ಉಲ್ಲೇಖಿಸಿದ ಪೊಲೀಸರು, ‘ದಾಸ್ ಈಗ ಆಂಧ್ರಪ್ರದೇಶದಲ್ಲಿ ಕ್ಷೇಮವಾಗಿದ್ದಾರೆ’ ಎಂದು ಹೇಳಿ ಕೈತೊಳೆದುಕೊಂಡರು. ಅಚ್ಚರಿ ಎನ್ನುವಂತೆಹಮೀರ್‌ಪುರ್‌ನಲ್ಲಿ ಹೇಳಿಕೆ ದಾಖಲಿಸಿದ ನಂತರ ರವೀಂದ್ರ ಸಹ ನಾಪತ್ತೆಯಾದರು. ದಾಸ್ ಅವರ ಮತ್ತೊಬ್ಬ ಗೆಳೆಯ ವಿಕಾಸ್ ಸಹ ಇದೀಗ ಕಣ್ಮರೆಯಾಗಿದ್ದಾರೆ.

ರವೀಂದ್ರ ಏಕೆ ಇಂಥ ಹೇಳಿಕೆ ನೀಡಿದರು? ಆಂಧ್ರದಲ್ಲಿ ದಾಸ್ ಇರುವುದು ನಿಜ ಎಂದಾದರೆ ಅವರನ್ನೇಕೆ ಪೊಲೀಸರು ದೆಹಲಿ ಹೈಕೋರ್ಟ್‌ಗೆ ಹಾಜರುಪಡಿಸುತ್ತಿಲ್ಲ? ರವೀಂದ್ರ ಮತ್ತು ವಿಕಾಸ್ ಕಣ್ಮರೆಯಾಗಲು ಯಾರು ಕಾರಣ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.