ADVERTISEMENT

ಕಲ್ಬುರ್ಗಿ ಹತ್ಯೆ: ಧಾರವಾಡದಲ್ಲಿರುವ ಹೈಕೋರ್ಟ್ ಪೀಠದ ‌ಮೇಲ್ವಿಚಾರಣೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 7:44 IST
Last Updated 26 ಫೆಬ್ರುವರಿ 2019, 7:44 IST
   

ನವದೆಹಲಿ: ಡಾ.ಎಂ.ಎಂ‌. ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸಬೇಕು. ಧಾರವಾಡದಲ್ಲಿರುವ ಹೈಕೋರ್ಟ್ ಪೀಠಇದರ ಮೇಲ್ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡವೇ ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸಲಿ ಎಂದು ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ಪೀಠ ಆದೇಶಿಸಿತು.

ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್ ಹಾಗೂ ಗೋವಿಂದ್ ಪಾನ್ಸರೆ ಹತ್ಯೆ ಮಾದರಿಯಲ್ಲಿ ಎಂ.ಎಂ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆ ನಡೆದಿರುವುದರಿಂದ ಒಂದೇ ಸಂಸ್ಥೆ ಈ ತನಿಖೆ ನಡೆಸಲಿ‌ ಮತ್ತು ಬಾಂಬೆ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ADVERTISEMENT

ಆದರೆ, ಗೌರಿ ಹತ್ಯೆ ಪ್ರಕರಣದ‌ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿರುವ ಕರ್ನಾಟಕ ಎಸ್ಐಟಿ ತನಿಖೆ ನಡೆಸಲಿ ಎಂದು ಕರ್ನಾಟಕ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ದೇವದತ್ತ ಕಾಮತ್ ಮನವಿ ಸಲ್ಲಿಸಿದ್ದರಿಂದ ಧಾರವಾಡ ಹೈಕೋರ್ಟ್ ಮೇಲ್ವಿಚಾರಣೆಗೆ ಸೂಚಿಸಿ ನ್ಯಾಯಮೂರ್ತಿ ವಿನಿತ್ ಸರನ್‌ ಅವರನ್ನು ಒಳಗೊಂಡ ಪೀಠ ಆದೇಶ ನೀಡಿತು.

ಧಾಬೋಲ್ಕರ್ ಹಾಗೂ ಪಾನ್ಸರೆ ಹತ್ಯೆ ಪ್ರಕರಣಗಳ ತನಿಖೆ ಹಾಗೂ ನಾಪತ್ತೆಯಾಗಿರುವ ಸಾರಂಗ್ ಹಾಗೂ ವಿನಯ ಪವಾರ್ ಕುರಿತು ವರದಿ ಸಲ್ಲಿಸುವಂತೆ ಪೀಠವು ಸಿಬಿಐ ಹಾಗೂ ಮಹಾರಾಷ್ಟ್ರ ಎಸ್ಐಟಿಗೆ ಸೂಚಿಸಿತು.

ಪತಿಯ ಹತ್ಯೆ ಪ್ರಕರಣದ ತನಿಖೆ ಪ್ರಗತಿ ಕಂಡಿಲ್ಲ ಎಂದು ದೂರಿ ಕಲ್ಬುರ್ಗಿ ಅವರ ಪತ್ನಿ ಉಮಾ ಅವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.