ADVERTISEMENT

ಎನ್‌ಎಂಪಿ ಉದ್ದೇಶ ಬಹಿರಂಗಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಒತ್ತಾಯ

ಪಿಟಿಐ
Published 3 ಸೆಪ್ಟೆಂಬರ್ 2021, 10:42 IST
Last Updated 3 ಸೆಪ್ಟೆಂಬರ್ 2021, 10:42 IST
ಪಿ.ಚಿದಂಬರಂ
ಪಿ.ಚಿದಂಬರಂ   

ಮುಂಬೈ: ‘ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್‌ (ಎನ್‌ಎಂಪಿ) ಯೋಜನೆಯ ಉದ್ದೇಶಗಳನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಶುಕ್ರವಾರ ಇಲ್ಲಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಆದಾಯ ಸಂಗ್ರಹವೇ ಈ ಯೋಜನೆಯ ಪ್ರಮುಖ ಉದ್ದೇಶವೇ’ ಎಂದು ಪ್ರಶ್ನಿಸಿದರು.

ಎನ್‌ಎಂಪಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮುಂದೆ ಅವರು 20 ಪ್ರಶ್ನೆಗಳನ್ನಿಟ್ಟರು.

ADVERTISEMENT

‘ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ₹ 6 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಗದೀಕರಣಕ್ಕಾಗಿ ಕೆಲವು ಸ್ವತ್ತುಗಳನ್ನು ಗುರುತಿಸಿದೆ.ಈ ಸ್ವತ್ತುಗಳು ಸದ್ಯಕ್ಕೆ ಸರ್ಕಾರಕ್ಕೆ ಪ್ರತಿ ವರ್ಷ ಆದಾಯವನ್ನೂ ತಂದು ಕೊಡುತ್ತಿವೆ. ಹೀಗಾಗಿ, ಒಟ್ಟಾರೆ ಈ ಯೋಜನೆ ಬಗ್ಗೆ ಕಾಂಗ್ರೆಸ್‌ ಪಕ್ಷ ಕೆಲವು ಆಕ್ಷೇಪಗಳು ಹಾಗೂ ಅನುಮಾನಗಳನ್ನು ಹೊಂದಿದೆ’ ಎಂದರು.

‘ನಾಲ್ಕು ವರ್ಷಗಳ ಅವಧಿಯ ನಿರೀಕ್ಷಿತ ಆದಾಯ ₹ 6 ಲಕ್ಷ ಕೋಟಿ ಹಾಗೂ ಬಹಿರಂಗಪಡಿಸದೇ ಇರುವ ಸದ್ಯದ ಆದಾಯದ ನಡುವಿನ ವ್ಯತ್ಯಾಸವನ್ನು ಸರ್ಕಾರ ಲೆಕ್ಕ ಹಾಕಿದೆಯೇ’ ಎಂದ ಅವರು, ಒಂದು ವೇಳೆ ಇಂಥ ಲೆಕ್ಕಾಚಾರ ಮಾಡಿದ್ದರೆ, ಮುಂದಿನ ನಾಲ್ಕು ವರ್ಷಗಳ ಅವಧಿಗೆ ಸಂಬಂಧಿಸಿ ಪ್ರತಿವರ್ಷದ ವ್ಯತ್ಯಾಸದ ಮೊತ್ತ ಎಷ್ಟು ಎಂದೂ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.