ಕೋಲ್ಕತ್ತ: ‘ತನ್ನ ಹಣಕಾಸು ಬಿಕ್ಕಟ್ಟು ಮುಚ್ಚಲು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ವಶಕ್ಕೆ ಪಡೆಯಲು ನರೇಂದ್ರ ಮೋದಿ ಸರ್ಕಾರ ಯತ್ನಿಸುತ್ತಿದೆ. ಇಂತಹ ಯಾವುದೇ ಕ್ರಮಗಳು ಮಹಾದುರಂತವಾಗಲಿದೆ’ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
‘ಆರ್ಬಿಐನ ಮಂಡಳಿಯಲ್ಲಿ ತನಗೆ ಬೇಕಾದವರು ಮಾತ್ರವೇ ಇರುವಂತೆ ಸರ್ಕಾರ ನೋಡಿಕೊಂಡಿದೆ. ಇದೇ 19 ರಂದು ನಡೆಯುವ ಮಂಡಳಿಯ ಸಭೆಯಲ್ಲಿ ತನ್ನದೇ ಪ್ರಸ್ತಾವಗಳನ್ನು ಇಡಲು ಯತ್ನಿಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಸರ್ಕಾರಕ್ಕೆ ಹಣಕಾಸು ಬಿಕ್ಕಟ್ಟಿನಿಂದಾಗಿ ದಿಘ್ಭ್ರಾಂತಿಯಾಗಿದೆ. ಚುನಾವಣಾ ವರ್ಷದಲ್ಲಿ ವೆಚ್ಚವನ್ನು ಹೆಚ್ಚಿಸಲು ಸರ್ಕಾರ ಬಯಸಿದೆ. ಎಲ್ಲಾ ದಾರಿಗಳು ಈಗ ಮುಚ್ಚಿ ಹೋಗಿವೆ. ಹತಾಶಗೊಂಡಿರುವ ಸರ್ಕಾರ ಆರ್ಬಿಐ ಬಳಿ ಇರುವ ಒಂದು ಲಕ್ಷ ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದೆ’ ಎಂದು ಮಾಜಿ ಹಣಕಾಸು ಸಚಿವರೂ ಆಗಿರುವ ಚಿದಂಬರಂ ವಿಶ್ಲೇಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.