ADVERTISEMENT

ದಾಳಿ ಬಗ್ಗೆ ಮೋದಿಯಿಂದಲೇ ಸಂದೇಹ: ಕಾಂಗ್ರೆಸ್‌ನ ವಕ್ತಾರ ಮನೀಷ್ ತಿವಾರಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 16:50 IST
Last Updated 3 ಮಾರ್ಚ್ 2019, 16:50 IST
   

ನವದೆಹಲಿ:‘ಪಾಕಿಸ್ತಾನದ ಮೇಲೆ ವಾಯುಪಡೆ ನಡೆಸಿದ ವೈಮಾನಿಕ ದಾಳಿಯನ್ನು ನಾವು ಯಾವತ್ತೂ ಪ್ರಶ್ನಿಸಿಯೇ ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯೇ ಈ ಕಾರ್ಯಾಚರಣೆಯ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

‘ರಫೇಲ್‌ ಯುದ್ಧವಿಮಾನಗಳು ಇದ್ದಿದ್ದರೆ ವೈಮಾನಿಕ ದಾಳಿಯ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದು ಮೋದಿ ಹೇಳಿದ್ದಾರೆ. ಈ ಮಾತಿನ ಅರ್ಥವೇನು’ ಎಂದು ಕಾಂಗ್ರೆಸ್‌ನ ವಕ್ತಾರ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.

‘ಯುಪಿಎ ಸರ್ಕಾರ ಸಿದ್ಧಪಡಿಸಿದ್ದ ಒಪ್ಪಂದವನ್ನು ಮುಂದುವರಿಸಿದ್ದಿದ್ದರೆ ರಫೇಲ್‌ ಯುದ್ಧವಿಮಾನಗಳು ಈಗಾಗಲೇ ವಾಯುಪಡೆಯಲ್ಲಿ ಇರುತ್ತಿದ್ದವು. ಆದರೆ ಮೋದಿ ಸರ್ಕಾರ ಆ ಒಪ್ಪಂದವನ್ನು ರದ್ದುಪಡಿಸಿ, ಹೊಸ ಒಪ್ಪಂದ ಮಾಡಿಕೊಂಡ ಕಾರಣ ವಿಮಾನಗಳು ಇನ್ನೂ ಭಾರತಕ್ಕೆ ಬಂದಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

‘ಪಾಕಿಸ್ತಾನವನ್ನು ಹೆದರಿಸುವ ಸಲುವಾಗಿ ವೈಮಾನಿಕ ದಾಳಿ ನಡೆಸಿದ್ದೆವು. ಯಾರನ್ನೂ ಕೊಲ್ಲಲ್ಲು ಅಲ್ಲ ಎಂದು ಕೇಂದ್ರ ಸಚಿವ ಎಸ್‌.ಎಸ್‌. ಅಹ್ಲುವಾಲಿಯಾ ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಅಹ್ಲುವಾಲಿಯಾ ಅವರ ಹೇಳಿಕೆಗಳಿಂದ ಸೇನಾಪಡೆಗಳ ಸ್ಥೈರ್ಯ ಕುಗ್ಗುತ್ತಿದೆ’ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.