ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರವೊಂದು ಧಾರವಾಡ ಎಸ್.ಪಿ ಕಚೇರಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಆದರೆ, ಈ ಪತ್ರವು ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪೋಸ್ಟ್ ಕಾರ್ಡ್ವೊಂದರಲ್ಲಿ, ‘ಪಾಕ್ ಮುಜ್ಬುಲ್ ಹಕ್’ ಎಂಬ ಉಗ್ರಗಾಮಿ ಸಂಘಟನೆ ಹೆಸರಿನಲ್ಲಿ ‘ರೆಡ್ ಅಲರ್ಟ್’ ಎಂದು ಬರೆದು ಅದರ ಪಕ್ಕದಲ್ಲಿ ಗನ್ ಚಿತ್ರ ಬಿಡಿಸಲಾಗಿದೆ. ಹುಬ್ಬಳ್ಳಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಅದರಲ್ಲಿ ಬೆದರಿಕೆ ಒಡ್ಡಲಾಗಿದ್ದು, ಫೆ.5 ರಂದೇ ಹಾವೇರಿಯಿಂದ ಪೋಸ್ಟ್ ಮಾಡಲಾಗಿದೆ. ಫೆ. 8ಕ್ಕೆ ಧಾರವಾಡ ಎಸ್.ಪಿ ಕಚೇರಿಗೆ ತಲುಪಿದೆ. ಈ ಸಂಬಂಧ ಧಾರವಾಡ ಉಪ ನಗರ ಠಾಣೆಯಲ್ಲಿ ಎಸ್.ಪಿ. ಸಂಗೀತಾ ಅವರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.
‘ದೇಶದ ರೈತರಿಗೆ ಪ್ರಧಾನಿ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಎರಡು ತನಿಖಾ ತಂಡಗಳನ್ನು ರಚಿಸಲಾಗಿತ್ತು. ತಂಡಗಳು ಹಾವೇರಿಯಲ್ಲಿ ಪರಿಶೀಲನೆ ನಡೆಸಿದ್ದು, ಇದೊಂದು ನಕಲಿ ಪತ್ರ ಎಂಬುದು ಖಚಿತವಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಹಾವೇರಿ ಎಸ್.ಪಿ. ಕೆ.ಪರಶುರಾಮ್, 'ಬೆದರಿಕೆ ಪತ್ರವು ನಕಲಿ ಎಂಬುದು ಪ್ರಾಥಮಿಕ ತನಿಖೆ
ಯಿಂದ ತಿಳಿದುಬಂದಿದೆ. ಇದರಿಂದ ಯಾವುದೇ ಅಪಾಯವಿಲ್ಲ. ಆದರೂ ಪತ್ರದ ಪೂರ್ವಾಪರ ಕುರಿತು ತನಿಖೆ ಮುಂದುವರಿದಿದೆ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.