ADVERTISEMENT

ಅಯೋಧ್ಯೆ ಭೂಮಿಪೂಜೆ| ಸಾವಿರಾರು ಅನಾಥ ಶವಗಳ ಸಂಸ್ಕಾರ ಮಾಡಿದ ಶರೀಫ್‌ಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 14:30 IST
Last Updated 4 ಆಗಸ್ಟ್ 2020, 14:30 IST
ಮೊಹಮದ್‌ ಶರೀಫ್‌
ಮೊಹಮದ್‌ ಶರೀಫ್‌   

ದೆಹಲಿ: ಆಯೋಧ್ಯೆ ಮೂಲದ ಸಾಮಾಜಿಕ ಕಾರ್ಯಕರ್ತ, ಸಾವಿರಾರು ಅನಾಥ ಶವಗಳಿಗೆ ಮುಕ್ತಿ ನೀಡಿರುವ, ಪದ್ಮಶ್ರೀ ಪುರಸ್ಕೃತ ಮೊಹಮದ್‌ ಶರೀಫ್‌ (ಶರೀಫ್‌ ಚಾಚಾ) ಅವರನ್ನು ಆ.5ರಂದು ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಆದರೆ, 80 ವರ್ಷ ವಯಸ್ಸಿನ ಶರೀಫ್‌ ಅವರಿಗೆ ವಯೋ ಸಹಜ ಕಾಯಿಲೆಗಳಿರುವುದರಿಂದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಈ ಮಧ್ಯೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿರುವ ಶರೀಫ್‌ ಅವರು, ‘ಸಾಧ್ಯವಾದರೆ ಭಾಗವಹಿಸುವುದಾಗಿ’ ತಿಳಿಸಿದ್ದಾರೆ.

ಸ್ಥಳೀಯವಾಗಿ ಶರೀಫ್‌ ಚಾಚಾ ಎಂದೇ ಕರೆಸಿಕೊಳ್ಳುವ ಮೊಹಮದ್‌ ಶರೀಫ್‌ ಅವರು ಕಳೆದ 27 ವರ್ಷಗಳಿಂದ ಫೈಜಾಬಾದ್‌ನಲ್ಲಿ ಅನಾಥ ಶವಗಳ ಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ಇದರಲ್ಲಿ ಅವರು ಹಿಂದೂ, ಮುಸ್ಲಿಂ ಎಂದು ಎಣಿಸಿಲ್ಲ.

ADVERTISEMENT

ಆಯೋಧ್ಯೆಯಲ್ಲಿ ಸೈಕಲ್‌ ಶಾಪ್‌ ನಡೆಸುತ್ತಿರುವ ಅವರು, ಸಣ್ಣ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ.

‘27 ವರ್ಷಗಳ ಹಿಂದೆನನ್ನ ಮಗನ (25 ವರ್ಷ) ಶವ ರೈಲ್ವೆ ಹಳಿಗಳ ಬಳಿ ಪತ್ತೆಯಾಗಿತ್ತು. ಪ್ರಾಣಿಗಳು ದೇಹವನ್ನು ಭಾಗಶಃ ತಿಂದುಹಾಕಿದ್ದವು. ನನ್ನ ಮಗನಿಗೆ ಒದಗಿದ ಸ್ಥಿತಿ ಇನ್ಯಾರಿಗೂ ಬರಬಾರದು ಎಂದು ಅಂದೇ ತೀರ್ಮಾನಿಸಿದೆ. ಆಗಿನಿಂದ ಈ ಕಾರ್ಯ ನಡೆಸಿಕೊಂಡು ಬರುತ್ತಿದ್ದೇನೆ,’ ಎಂದು ಅವರು ‘ದಿ ವೀಕ್‌’ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.