ಬಲ್ಲಿಯಾ, ಉತ್ತರ ಪ್ರದೇಶ: ಬಲ್ಲಿಯಾ ಬಳಿ ಗಂಗಾ ನದಿಯಲ್ಲಿ ಮತ್ತೆ 7 ಹೆಣಗಳು ತೇಲಿ ಬಂದಿವೆ. ಇದರೊಂದಿಗೆ ಬಲ್ಲಿಯಾ ಜಿಲ್ಲೆಯಲ್ಲಿ ನದಿಯಲ್ಲಿ ಈ ವರೆಗೆ ತೇಲಿಬಂದ ಶವಗಳ ಸಂಖ್ಯೆ 52ಕ್ಕೇರಿದಂತಾಗಿದೆ.
ಕೋವಿಡ್–19 ನಿಂದಾಗಿ ಮೃತಪಟ್ಟವರ ಶವಗಳನ್ನು ನದಿಗೆ ಎಸೆದಿರುವ ಸಾಧ್ಯತೆ ಇದೆ ಎಂದಿರುವ ಜಿಲ್ಲಾಡಳಿತ, ತೇಲಿ ಬಂದ ಈ ಶವಗಳ ಅಂತ್ಯಸಂಸ್ಕಾರವನ್ನು ತಕ್ಷಣವೇ ನೆರವೇರಿಸಿದೆ.
ನಾರಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಭರೌಲಿ ಘಾಟ್ ಹಾಗೂ ಉಜಿಯಾರ್ ಮತ್ತು ಕುಲ್ಹಡಿಯಾಗಳಲ್ಲಿ ಕನಿಷ್ಠ 45 ಹೆಣಗಳು ತೇಲಿ ಬಂದಿವೆ ಎಂದು ಬಲ್ಲಿಯಾ ನಿವಾಸಿಗಳು ಹೇಳಿದ್ದಾರೆ.
‘ಕೆಲವು ಹೆಣಗಳು ಕೊಳೆತ ಸ್ಥಿತಿಯಲ್ಲಿದ್ದು, ಬಲ್ಲಿಯಾ–ಬಕ್ಸರ್ ಸೇತುವೆ ಕೆಳಗೆ ತೇಲುತ್ತಿದ್ದವು’ ಎಂದು ಜಿಲ್ಲಾಧಿಕಾರಿ ಅದಿತಿ ಸಿಂಗ್ ಹೇಳಿದ್ದಾರೆ.
‘ಉಪವಿಭಾಗಾಧಿಕಾರಿ ರಾಜೇಶ್ ಯಾದವ್, ಸರ್ಕಲ್ ಆಫಿಸರ್ ಜಗವೀರ್ ಸಿಂಗ್ ಚೌಹಾಣ್ ಈ ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ. ಗೌರವದೊಂದಿಗೆ ಶವಗಳ ಸಂಸ್ಕಾರ ನೆರವೇರಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.