ADVERTISEMENT

ಕೊರೊನಾವನ್ನು ಉತ್ತಮವಾಗಿ ನಿರ್ವಹಿಸಿದರೆ ಲಾಕ್‌ಡೌನ್ ಸಡಿಲಿಕೆ ಸಾಧ್ಯ: ಜಾವಡೇಕರ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 14:08 IST
Last Updated 19 ಏಪ್ರಿಲ್ 2020, 14:08 IST
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್   

ನವದೆಹಲಿ:ಭಾರತದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾದರೆ ಮಾತ್ರ ಲಾಕ್‌ಡೌನ್‌ ಅನ್ನು ಸಡಿಲಿಸಲು ಸಾಧ್ಯವಾಗುತ್ತದೆ ಎಂದುಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.

ಸುದ್ದಿಸಂಸ್ಥೆ ಪಿಟಿಐನೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜಸ್ಥಾನದ ಕೋಟಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರಲು ಬಸ್ಸುಗಳನ್ನು ಕಳುಹಿಸಲು ತೀರ್ಮಾನಿಸಿರುವ ಉತ್ತರ ಪ್ರದೇಶದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ನಿರ್ಧಿಷ್ಟ ಘಟನೆ ಕುರಿತು ಮಾತನಾಡುವುದಿಲ್ಲ. ಆದರೆ ಮನೆಯಿಂದ ದೂರವಿದ್ದು ಕಷ್ಟಗಳನ್ನು ಎದುರಿಸುತ್ತಿರುವವರ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. ನೀವು ಎಲ್ಲಿರುವಿರೋ ಅಲ್ಲಿಯೇ ಇರಿ ಎಂದಿದ್ದಾರೆ. ಅದು ನಿಜವಾದ ಅಂಶ ಎಂದು ತಿಳಿಸಿದರು.

''ನೀವು ಎಲ್ಲಿಯೇ ಇದ್ದರೂ ಅಲ್ಲೇ ಉಳಿಯಿರಿ ಮತ್ತು ಪರಸ್ಪರ ಸಹಾಯ ಮಾಡಿ ಎಂಬುದು ನಮ್ಮ ನೀತಿ". ಈ ವಿಷಯದಲ್ಲಿ ಮೋದಿಯವರ ಮನವಿ ಶೇ 100 ರಷ್ಟು ಒಪ್ಪಬೇಕು. ಸ್ಥಗಿತಗೊಳಿಸುವ ಆಯ್ಕೆಗಳು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ನಡುವೆ ಇತರ ಕೆಲವು ದೇಶಗಳ ನಾಯಕರು "ಗೊಂದಲಕ್ಕೊಳಗಾಗಿದ್ದಾರೆ". ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡು ಮನಸ್ಸಿಲ್ಲ. ಮುಂದಿನ ಹಾದಿಯ ಬಗ್ಗೆ ಏನು ಮಾಡಬೇಕು ಮತ್ತು ಯಾವಾಗ ಮಾಡಬೇಕೆಂಬುದರ ಬಗ್ಗೆ ತಿಳಿದಿದೆ ಎಂದು ತಿಳಿಸಿದರು.

ADVERTISEMENT

ಪ್ರಧಾನಿ ಸರಿಯಾದ ಸಮಯದಲ್ಲಿ ಲಾಕ್‌ಡೌನ್ ಕರೆ ನೀಡಿದರು ಮತ್ತು ಈಗ ಲಾಕ್‌ಡೌನ್ ಮುಂದುವರಿಯುತ್ತಿರುವಾಗ ಭಾಗಶಃ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡುತ್ತಿದ್ದಾರೆ. ಅಂತಹ (ಬೃಹತ್) ಜನಸಂಖ್ಯೆಯೊಂದಿಗೆ ನಾವು ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದ್ದೇವೆ, ಇದು ಮುಂದುವರಿದರೆ ಮಾತ್ರ ನಮಗೆ ಹೆಚ್ಚಿನ ಸಡಿಲಿಕೆ ಸಿಗುತ್ತದೆ ಎಂದು ಅವರು ಹೇಳಿದರು.

ಏಪ್ರಿಲ್ 20 ರಿಂದ ಪ್ರಾರಂಭವಾಗುವ ಲಾಕ್‌ಡೌನ್‌ ಸಡಿಲಿಕೆಯು ಮುಖ್ಯವಾಗಿ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದರೆ, ನಗರಗಳಲ್ಲಿ ಶೀಘ್ರದಲ್ಲೇ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಾಕ್‌ಡೌನ್ ಅನ್ನು ಬಹಳ ಯಶಸ್ವಿಯಾಗಿ ನಡೆಸಲಾಗಿದೆ. ಇದು ಕೊರೊನಾ ವೈರಸ್ ವಿರುದ್ಧ ಹೋರಾಡುವ ದಾರಿಯಾಗಿದ್ದರಿಂದಾಗಿ ಜಗತ್ತೇ ಇಂದು ಇದನ್ನು ಪ್ರಶಂಸಿಸುತ್ತಿದೆ. ಆದರೆ ಇದರ ನಂತರವೂ ನೀವು ಶಾಶ್ವತವಾಗಿ ಲಾಕ್‌ಡೌನ್ ಅಡಿಯಲ್ಲಿರಲು ಸಾಧ್ಯವಿಲ್ಲ. ಏಕೆಂದರೆ ಆರ್ಥಿಕ ಚಟುವಟಿಕೆಯನ್ನು ಪ್ರಾರಂಭಿಸಲು ಇದು ಅಗತ್ಯವಾಗಿತ್ತು ಎಂದು ಹೇಳಿದರು.

"ಅಂತಹ ಸಾಂಕ್ರಾಮಿಕ ರೋಗದಿಂದ ಜೀವಗಳನ್ನು ಉಳಿಸುವಲ್ಲಿ ದೇಶವು ಉತ್ತಮವಾಗಿ ಕೆಲಸ ಮಾಡಿರುವುದನ್ನು ಜಗತ್ತು ಕಂಡಿದೆ. ನಾವು ಜೀವಗಳನ್ನು ಉಳಿಸಿದ್ದೇವೆ ಮತ್ತು ಅದೇ ಸಮಯದಲ್ಲಿ ನಾವು ಆರ್ಥಿಕ ಚಟುವಟಿಕೆಯನ್ನು ಪ್ರಾರಂಭಿಸಬೇಕು. ಆ ನಿಟ್ಟಿನಲ್ಲಿ ಪ್ರಧಾನಿ ಆರ್ಥಿಕ ಚಟುವಟಿಕೆಗಳನ್ನು ಭಾಗಶಃ ತೆರೆದಿದ್ದಾರೆ" ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.