ಭೋಪಾಲ್: ಗಾಂಧೀಜಿಯನ್ನು ‘ಪಾಕಿಸ್ತಾನದ ರಾಷ್ಟ್ರಪಿತ’ ಎಂದು ಬಣ್ಣಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಮಧ್ಯಪ್ರದೇಶದ ಬಿಜೆಪಿ ನಾಯಕ ಸೌಮಿತ್ರ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಸೌಮಿತ್ರ ಅವರು ಬಿಜೆಪಿಯ ಮಾಧ್ಯಮ ಸಂಪರ್ಕ ಘಟಕದ ರಾಜ್ಯ ಸಂಚಾಲಕರಾಗಿದ್ದರು. ‘ರಾಜ್ಯ ಘಟಕದ ಅಧ್ಯಕ್ಷ ರಾಕೇಶ್ ಸಿಂಗ್ ಅವರು ಸೌಮಿತ್ರ ಅವರ ಪ್ರಾಥಮಿಕ ಸದಸ್ಯತ್ವವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ’ ಎಂದು ಬಿಜೆಪಿ ಮಾಧ್ಯಮ ಘಟಕದ ಉಸ್ತುವಾರಿ ವಹಿಸಿರುವ ಲೋಕೇಂದ್ರ ಪರಾಶರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಅವರು (ಗಾಂಧೀಜಿ) ರಾಷ್ಟ್ರಪಿತ ಎಂಬುದು ನಿಜ, ಆದರೆ ‘ಪಾಕಿಸ್ತಾನದ ಪಿತ’. ಅವರಂಥ ಲಕ್ಷಾಂತರ ಮಕ್ಕಳು ದೇಶದಲ್ಲಿದ್ದರು. ಅವರಲ್ಲಿ ಕೆಲವರು ಉಪಯೋಗಿಗಳಾಗಿದ್ದರೆ ಕೆಲವರು ನಿಷ್ಪ್ರಯೋಜಕರಾಗಿದ್ದರು’ ಎಂದು ಸೌಮಿತ್ರ ಅವರು ಗುರುವಾರ ರಾತ್ರಿ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದರು.
ಪಕ್ಷದಿಂದ ಅಮಾನತುಗೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಸೌಮಿತ್ರ, ‘ಪಾಕಿಸ್ತಾನ ರಚನೆಯ ಪರಿಕಲ್ಪನೆ ಬ್ರಿಟಿಷರದ್ದಾಗಿತ್ತು. ಪ್ರಧಾನಿಯಾಗಬೇಕೆಂಬ ಧಾವಂತದಲ್ಲಿದ್ದ ನೆಹರೂ ಮತ್ತು ಜಿನ್ನಾ ಈ ಪರಿಕಲ್ಪನೆಯ ಪ್ರಚಾರಕರಾಗಿದ್ದರು. ರಾಷ್ಟ್ರ ವಿಭಜನೆಯ ಪ್ರಕ್ರಿಯೆಗೆ ಗಾಂಧೀಜಿಯ ಆಶೀರ್ವಾದವೂ ಇತ್ತು. ಅವರು ಮೌನವಾಗಿದ್ದು ಪಾಕಿಸ್ತಾನ ರಚನೆಗೆ ಬೆಂಬಲ ನೀಡಿದ್ದರಿಂದ ಅವರನ್ನು ‘ಪಾಕಿಸ್ತಾನದ ರಾಷ್ಟ್ರಪಿತ’ ಎನ್ನುವುದೇ ಸರಿ’ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.