ಭೊಪಾಲ್: ‘ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸುವುದಿಲ್ಲ. ಆದರೆ, ಗೂಂಡಾಗಳು ಮತ್ತು ಗಲಭೆಕೋರರನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರು ಬುಧವಾರ ಇಲ್ಲಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗ ದಳ ನಿಷೇಧಿಸಲಾಗುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಜರಂಗ ದಳವು ಗೂಂಡಾಗಳ ಮತ್ತು ಸಮಾಜಘಾತುಕ ವಿಷಯಗಳನ್ನು ಒಳಗೊಂಡ ಸಂಘಟನೆಯಾಗಿದೆ. ಅದರಲ್ಲಿ ಕೆಲ ಉತ್ತಮ ಜನರೂ ಇರಬಹುದು. ಆದರೆ, ಗೂಂಡಾಗಳನ್ನು ಮತ್ತು ಗಲಭೆಗಳಲ್ಲಿ ಭಾಗಿಯಾಗುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ’ ಎಂದರು.
‘ಈ ದೇಶವು ಎಲ್ಲರಿಗೂ ಸೇರಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ದೇಶವನ್ನು ಒಡೆಯುವುದನ್ನು ನಿಲ್ಲಿಸಬೇಕು. ಶಾಂತಿ ಸ್ಥಾಪಿಸಿದರೆ ಮಾತ್ರ ದೇಶ ಅಭಿವೃದ್ಧಿ ಕಡೆಗೆ ಸಾಗುತ್ತದೆ’ ಎಂದರು.
‘ಹಿಂದೂ ರಾಷ್ಟ್ರ’ದ ಕುರಿತು ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ನೀಡಿದ್ದ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ನೀವು ಮತ್ತು ಬಿಜೆಪಿಯವರು ಕಮಲ್ನಾಥ್ ಅವರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದ್ದೀರಿ. ಪ್ರಮಾಣ ವಚನವನ್ನು ಸಂವಿಧಾನದ ಮೇಲೆ ಸ್ವೀಕರಿಸಿದ್ದೀರೋ ಅಥವಾ ಹಿಂದೂ ರಾಷ್ಟ್ರದ ಮೇಲೆ ಸ್ವೀಕರಿಸಿದ್ದೀರೋ ಎಂದು ಪ್ರಧಾನಿ, ಗೃಹ ಸಚಿವ ಮತ್ತು ಮುಖ್ಯಮಂತ್ರಿಯನ್ನು ಕೇಳಲು ನಾನು ಬಯಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.