ADVERTISEMENT

ಮತದಾನದ ಹಕ್ಕು ‘ಅತಿ ದೊಡ್ಡ ಪ್ರಮಾದ’ ಎಂದಿದ್ದ ಅಧಿಕಾರಿ ವಿರುದ್ಧ ಕ್ರಮಕ್ಕೆ ಆದೇಶ

ಪಿಟಿಐ
Published 14 ಜುಲೈ 2022, 13:51 IST
Last Updated 14 ಜುಲೈ 2022, 13:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್: ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವ ಈ ದೇಶದ ‘ಅತಿದೊಡ್ಡ ಪ್ರಮಾದಗಳು’ ಎಂದು ಹೇಳಿರುವ ಹೆಚ್ಚುವರಿ ಜಿಲ್ಲಾಧಿಕಾರಿ ವಿರುದ್ಧಶಿಸ್ತುಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶ ಸರ್ಕಾರವು ಆದೇಶಿಸಿದೆ.

ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಕಡೆಯ ಹಂತದ ಮತದಾನ ಬುಧವಾರ ನಡೆದಿತ್ತು. ಅದಕ್ಕೂ ಮುನ್ನ, ಶಿವಪುರಿಯ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) ಉಮೇಶ್ ಶುಕ್ಲಾ ಈ ರೀತಿ ಹೇಳಿರುವ ವಿಡಿಯೊ ಜಾಲತಾಣದಲ್ಲಿ ಹೆಚ್ಚು ಹಂಚಿಕೆಯಾಗಿತ್ತು. ಅಧಿಕಾರಿಯ ನಿಲುವಿಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಶಿಸ್ತುಕ್ರಮಕ್ಕೆ ಆದೇಶಿಸಲಾಗಿದೆ.

‘ಇದು, ಗಂಭೀರ ವಿಷಯ. ಅಧಿಕಾರಿಗೆ ನೋಟಿಸ್ ನೀಡಿದ್ದು, ಶಿಸ್ತುಕ್ರಮ ಜರುಗಿಸಲಾಗುವುದು. ಅಧಿಕಾರಿ ವರ್ಗಾವಣೆ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ’ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿದರು.

ADVERTISEMENT

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮತಪತ್ರಗಳ ಕೊರತೆಯ ಕಾರಣ ನಮಗೆ ಮತದಾನ ಮಾಡಲು ಆಗಲಿಲ್ಲ ಎಂದು ಕೆಲ ನೌಕರರು ಮಂಗಳವಾರ ಅಹವಾಲು ತೋಡಿಕೊಂಡಾಗ, ಅದಕ್ಕೆ ಪ್ರತಿಕ್ರಿಯಿಸುತ್ತಾ ಶುಕ್ಲಾ ಅವರು ಹೀಗೇ ಹೇಳಿದ್ದಾರೆ.

‘ಮತದಾರರ ಪಟ್ಟಿಯಲ್ಲಿನಿಮ್ಮ ಹೆಸರು ಇಲ್ಲದಿದ್ದರೆ ನಿಮಗಾಗುವ ತೊಂದರೆ ಏನು? ಮತದಾನ ಮಾಡಿದ್ದರಿಂದ ಇದುವರೆಗೆ ನಿಮಗೆ ಏನು ಸಿಕ್ಕಿದೆ? ಎಷ್ಟೊಂದು ಭ್ರಷ್ಟ ನಾಯಕರನ್ನು ನಾವು ರೂಪಿಸಿದ್ದೇವೆ. ನನ್ನ ಪ್ರಕಾರ, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕು ಈ ದೇಶದ ಅತಿದೊಡ್ಡ ಪ್ರಮಾದಗಳಾಗಿವೆ’ ಎಂದು ಅಧಿಕಾರಿ ಶುಕ್ಲಾ ಹೇಳಿರುವುದು ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.