ನವದೆಹಲಿ: 2019–20ನೇ ಸಾಲಿನ ಮುಂಗಾರು ಬೆಳೆಯ ಧಾನ್ಯ ಹಾಗೂ ಎಣ್ಣೆಬೀಜಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರ ಗಮನಾರ್ಹವಾಗಿ ಏರಿಕೆ ಮಾಡಿದೆ. ಭತ್ತದ ಬೆಂಬಲ ಬೆಲೆ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗಿದ್ದರೆ, ರಾಗಿಯ ಬೆಲೆ ₹ 253ರಷ್ಟು ಏರಿಕೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳನ್ನು ಕುರಿತ ಕೇಂದ್ರೀಯ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ತಿಳಿಸಿದರು.
ಮುಂಗಾರಿನ ಪ್ರಮುಖ ಬೆಳೆ ಭತ್ತದ ಬೆಂಬಲ ಬೆಲೆಯನ್ನು ₹ 65ರಷ್ಟು ಹೆಚ್ಚಿಸಲಾಗಿದೆ. ರಾಗಿಯ ಬೆಲೆಯನ್ನು ಗರಿಷ್ಠ ಪ್ರಮಾಣದಲ್ಲಿ ಏರಿಕೆ ಮಾಡಿ ಕ್ವಿಂಟಲ್ಗೆ ₹3,150 ನಿಗದಿ ಮಾಡಲಾಗಿದೆ.‘ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಲೆ ನೀಡಬೇಕೆಂಬ ನೀತಿಯನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಲಾಗಿದೆ’ ಎಂದು ಸಚಿವ ತೋಮರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.