ಬಸ್ತಿ(ಉತ್ತರ ಪ್ರದೇಶ): ತಮ್ಮ 10 ವರ್ಷಗಳ ಪ್ರೇಯಸಿಯನ್ನು ವಿವಾಹವಾಗಲು ಉತ್ತರ ಪ್ರದೇಶದ ಬಸ್ತಿಯ 34 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗ ಅವರು ಸದ್ದಾಂ ಎಂದಿದ್ದ ತಮ್ಮ ಹೆಸರನ್ನು ಶಿವಶಂಕರ್ ಎಂದು ಬದಲಿಸಿಕೊಂಡಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಮಹಿಳೆ, ಸದ್ದಾಂ ಮತ್ತು ಆತನ ಕುಟುಂಬದವರ ವಿರುದ್ಧ ಮದುವೆ ನೆಪದಲ್ಲಿ ಅತ್ಯಾಚಾರ, ಗರ್ಭಪಾತ ಮಾಡಿಸಲು ಒತ್ತಾಯಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಆದರೆ, ಈಗ ಪರಸ್ಪರ ಇಚ್ಛೆಯಿಂದಲೇ ಮದುವೆಯಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ದೇವೇಂದ್ರ ಸಿಂಗ್ ಹೇಳಿದ್ದಾರೆ.
ನಗರ್ ಬಜಾರ್ ಹಳ್ಳಿಯ ಸದ್ಧಾಂ ಹುಸೇನ್, ಅದೇ ಹಳ್ಳಿಯ ಮಹಿಳೆಯ ಜೊತೆ 10 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರಿಂದ ಸದ್ದಾಂ ಕುಟುಂಬ ಮದುವೆಗೆ ನಿರಾಕರಿಸಿತ್ತು. ಮೂರು ದಿನಗಳ ಹಿಂದೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಡ ಮತ್ತು ಹತ್ಯೆ ಬೆದರಿಕೆ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ನಡುವೆ, ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಸದ್ಧಾಂ ತನ್ನ ಹೆಸರನ್ನು ಶಿವಶಂಕರ್ ಎಂದು ಬದಲಾಯಿಸಿಕೊಂಡು ದೇವಾಲಯವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾನೆ. ದೇವಾಲಯವನ್ನು 7 ಸುತ್ತು ಸುತ್ತು ಹಾಕಿ ಜೀವನಪರ್ಯಂತ ಜೊತೆಗಿರುವ ಪ್ರತಿಜ್ಞೆ ಮಾಡಿದ್ದಾನೆ.
ನಾವಿಬ್ಬರೂ ಒಪ್ಪಿ ಮದುವೆಯಾಗಿದ್ದು, 10 ವರ್ಷಗಳಿಂದ ಪ್ರೀತಿಸುತ್ತಿದ್ದೆವು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.