ಪ್ರಾತಿನಿಧಿಕ ಚಿತ್ರ
ಲಖನೌ: ಮುಜಫರ್ನಗರದಲ್ಲಿ 2013ರಲ್ಲಿ ನಡೆದ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ, ಉತ್ತರ ಪ್ರದೇಶದ ಮಾಜಿ ಸಚಿವ ಸೈದುಜ್ಜಮಾನ್, ಮಾಜಿ ಸಂಸದ ಕದೀರ್ ರಾಣಾ ಸೇರಿದಂತೆ ಮುಸ್ಲಿಂ ಸಮುದಾಯದ 9 ನಾಯಕರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಾರೋಪ ಹೊರಿಸಿದೆ.
ಮುಜಫರ್ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನಡೆದ ಘರ್ಷಣೆಯಿಂದಾಗಿ, 60ಕ್ಕೂ ಹೆಚ್ಚು ಮಂದಿ ಮೃತಪಟ್ಟು, 40 ಸಾವಿರಕ್ಕೂ ಅಧಿಕ ಜನರು ನೆಲೆ ಕಳೆದುಕೊಂಡಿದ್ದರು.
ಕಾಂಗ್ರೆಸ್ ನಾಯಕರಾದ ಸೈದುಜ್ಜಮಾನ್, ರಾಣಾ, ಮಾಜಿ ಶಾಸಕರಾದ ನೂರ್ ಸಲಿಂ ರಾಣಾ ಮತ್ತು ಮೌಲಾನಾ ಜಮೀಲ್, ನಗರ ಮಂಡಳಿಯ ಮಾಜಿ ಸದಸ್ಯದಾರ ಅಸಾದ್ ಜಮಾ ಅನ್ಸಾರಿ, ಸುಲ್ತಾನ್ ಮಷೀರ್, ನೌಶಾದ್, ನೌಶಾದ್ ಖುರೇಷಿ ಮತ್ತು ಸಲ್ಮಾನ್ ಸಯೀದ್ ವಿರುದ್ಧ ವಿಶೇಷ ನ್ಯಾಯಾಧೀಶ ದೇವೇಂದ್ರ ಸಿಂಗ್ ಫೌಜ್ದಾರ್ ಅವರು ದೋಷಾರೋಪ ಹೊರಿಸಿದ್ದಾರೆ.
ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆಯು ಮಾರ್ಚ್ 5ರಂದು ನಡೆಯಲಿದೆ.
2013ರ ಆಗಸ್ಟ್ 30ರಂದು ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಖಲಾಪರ್ ಎಂಬಲ್ಲಿ ನಡೆದ ಮುಸ್ಲಿಂ ಪಂಚಾಯತ್ ಸಭೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿ ಗಲಭೆಗೆ ಕಾರಣವಾದ ಆರೋಪದ ಮೇಲೆ ಒಟ್ಟು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ, ಒಬ್ಬ ಆರೋಪಿ ಅಹ್ಸಾನ್ ಖುರೇಷಿ ವಿಚಾರಣೆ ಸಮಯದಲ್ಲೇ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.