ಮುಂಬೈ: ವಿರೋಧ ಪಕ್ಷಗಳಿಗೆ ತಾಕತ್ತಿದ್ದರೆ ಸರ್ಕಾರವನ್ನು ಉರುಳಿಸಲಿ. ಮೂರು ಗಾಲಿಯ ಸರ್ಕಾರವಾದರೂ, ಅದರ ಸ್ಟೇರಿಂಗ್ ವೀಲ್ ನನ್ನ ನಿಯಂತ್ರಣದಲ್ಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸವಾಲೆಸೆದಿದ್ದಾರೆ.
‘ನನ್ನ ಸರ್ಕಾರದ ಭವಿಷ್ಯ ವಿರೋಧ ಪಕ್ಷಗಳ ಕೈಯಲ್ಲಿ ಇಲ್ಲ. ಮೂರು ಗಾಲಿ ವಾಹನದ ಸ್ಟೀರಿಂಗ್ ವೀಲ್ ನನ್ನ ಕೈಯಲಿದೆ. ಮೂರು ಗಾಲಿ(ಆಟೊ ರಿಕ್ಷಾ) ಬಡವನ ವಾಹನವಾಗಿದೆ’ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
‘ಎನ್ಸಿಪಿ ಮತ್ತು ಕಾಂಗ್ರೆಸ್ ಸಕಾರಾತ್ಮಕ ಚಿಂತನೆಯನ್ನು ಹೊಂದಿದ್ದು ಮಹಾ ವಿಕಾಸ್ ಅಘಡಿ ಸರ್ಕಾರ, ಆ ಪಕ್ಷಗಳ ಅನುಭವವನ್ನು ಸದುಪಯೋಗಪಡಿಸಿಕೊಳ್ಳಲಿದೆ ಎಂದು ಅವರು ತಿಳಿಸಿದರು.
‘ಸರ್ಕಾರ ಉರುಳಿಸುವ ಕಾರ್ಯದಲ್ಲಿ ನಿಮಗೆ ಬಹಳ ತೃಪ್ತಿ ಸಿಗುತ್ತದೆ. ಹಾಗಿದ್ದಲ್ಲಿ ಈಗಲೇ ಸರ್ಕಾರ ಉರುಳಿಸಿ. ಅದಕ್ಕಾಗಿ ಸೆಪ್ಟೆಂಬರ್–ಅಕ್ಟೋಬರ್ ತಿಂಗಳಿನವರೆಗೆ ಏಕೆ ಕಾಯಬೇಕು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವರಿಗೆ ರಚನಾತ್ಮಕ ಕೆಲಸಗಳಲ್ಲಿ, ಇನ್ನೂ ಕೆಲವರಿಗೆಉರುಳಿಸುವ ಕೆಲಸದಲ್ಲಿ ಖುಷಿ ಸಿಗುತ್ತದೆ ಎಂದು ಠಾಕ್ರೆ ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.