ADVERTISEMENT

ಮ್ಯಾನ್ಮಾರ್: ನಕಲಿ ಐಟಿ ಉದ್ಯೋಗ ಜಾಲ– ಕೇಂದ್ರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 19:41 IST
Last Updated 24 ಸೆಪ್ಟೆಂಬರ್ 2022, 19:41 IST
   

ನವದೆಹಲಿ: ಥಾಯ್ಲೆಂಡ್‌ನಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ವಂಚಿಸುತ್ತಿರುವ ನಕಲಿ ಕಂಪನಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಕೇಂದ್ರ ಸರ್ಕಾರವು ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ವೃತ್ತಿಪರರಿಗೆ ಶನಿವಾರ ಸಲಹೆ ನೀಡಿದೆ.

ಉದ್ಯೋಗದ ಆಮಿಷವೊಡ್ಡಿ, ಭಾರತೀಯರಿಗೆ ವಂಚಿಸುತ್ತಿದ್ದ ನಕಲಿ ಐಟಿ ಕಂಪನಿಗಳ ಜಾಲದ ಬಗ್ಗೆ ಬ್ಯಾಂಕಾಕ್‌ ಹಾಗೂ ಯಾಂಗೂನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗಳು ಮಾಹಿತಿ ನೀಡಿದ ಬೆನ್ನಲ್ಲೇ, ವಿದೇಶಾಂಗ ಸಚಿವಾಲಯ ಈ ಸಲಹೆ ನೀಡಿದೆ.

ಭಾರತದ ಹಲವು ಯುವಕರನ್ನು ಬಂಧನದಲ್ಲಿರಿಸಿ, ಮ್ಯಾನ್ಮಾರ್‌ನಲ್ಲಿ ಬಲವಂತವಾಗಿ ಸೈಬರ್ ಅಪರಾಧ ಕೃತ್ಯಗಳನ್ನು ಮಾಡಿಸಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಸಲಹೆ ನೀಡಿದೆ.

ADVERTISEMENT

ಥಾಯ್ಲೆಂಡ್‌ನ ನಕಲಿ ಕಂಪನಿಗಳು ಭಾರತದ ಐಟಿ ವೃತ್ತಿಪರರನ್ನು ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ ಹುದ್ದೆಗಳಿಗೆ ನೇಮಕ ಮಾಡಿಕೊಂಡು, ಬಳಿಕ ಅವರನ್ನು ಕಾಡುಗಳ ಮೂಲಕ ಅಕ್ರಮವಾಗಿ ಮ್ಯಾನ್ಮಾರ್‌ಗೆ ಕರೆದುಕೊಂಡು ಹೋಗುತ್ತಿದ್ದವು. ನಂತರ ಆಗ್ನೇಯ ಮ್ಯಾನ್ಮಾರ್ ಮ್ಯಾವಾಡ್ಡಿ ಎನ್ನುವ ಪ್ರದೇಶದಲ್ಲಿ ಅವರ ಮೂಲಕ ಸೈಬರ್ ಅಪರಾಧ ಕೃತ್ಯಗಳನ್ನು ಮಾಡಿಸಲಾಗುತ್ತಿದೆ ಎನ್ನುವ ಕುರಿತು ಸಚಿವಾಲಯಕ್ಕೆ ವರದಿಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಮ್ಯಾವಾಡ್ಡಿ ಸಿಲುಕಿರುವ ಭಾರತೀಯ ಐಟಿ ವೃತ್ತಿಪರರ ಸಂಖ್ಯೆ ಇನ್ನೂ ನಿಖರವಾಗಿ ಖಚಿತಪಡಿಸಲಾಗಿಲ್ಲ. ಅವರಲ್ಲಿ ಕನಿಷ್ಠ 32 ಮಂದಿಯನ್ನು ರಕ್ಷಿಸಲು ಭಾರತ ವ್ಯವಸ್ಥೆ ಮಾಡಿದೆ. ಅಂತೆಯೇ ಯಾಂಗೂನ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯು 50 ಮಂದಿಯೊಂದಿಗೆ ಸಂಪರ್ಕದಲ್ಲಿದೆ ಎಂದು ಇವೇ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.