ADVERTISEMENT

‘ಅಪಘಾತದಲ್ಲಿ ಸಾವನ್ನಪ್ಪಿದ್ದ ಪತ್ರಕರ್ತನಿಗೆ ಜೀವ ಬೆದರಿಕೆ ಇತ್ತು’

ಕುಟುಂಬ ಸದಸ್ಯರು, ಸ್ನೇಹಿತರ ಆರೋಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 11:32 IST
Last Updated 15 ಡಿಸೆಂಬರ್ 2020, 11:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ರಸ್ತೆ ಅಪಘಾತದಲ್ಲಿ ಸೋಮವಾರ ಸಾವನ್ನಪ್ಪಿದ ಪತ್ರಕರ್ತ ಎಸ್‌.ವಿ. ಪ್ರದೀಪ್ ಅವರಿಗೆ ಕೆಲವರಿಂದ ಜೀವ ಬೆದರಿಕೆ ಇತ್ತು ಎಂದು ಪತ್ರಕರ್ತನ ಕುಟುಂಬ ಮತ್ತು ಸ್ನೇಹಿತರು ಆರೋಪಿಸಿದ್ದಾರೆ.

‘ವಿವಿಧ ಸುದ್ದಿಗಳಿಗೆ ಸಂಬಂಧಿಸಿದಂತೆ ನನ್ನ ಮಗ ಬೆದರಿಕೆಗಳನ್ನು ಎದುರಿಸುತ್ತಿದ್ದ’ ಎಂದು ಪ್ರದೀಪ್ ಅವರ ತಾಯಿ ವಸಂತಕುಮಾರಿ ಆರೋಪಿಸಿದ್ದಾರೆ.

ತಿರುವನಂತಪುರದ ಪಪ್ಪನಮ್‌ಕೋಡ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದ ಪ್ರದೀಪ್ ಅವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದರು. ಆದರೆ, ಅಪಘಾತದ ಸ್ಥಳದಲ್ಲಿ ಅವರ ಸ್ಕೂಟರ್ ಪತ್ತೆಯಾಗಿರಲಿಲ್ಲ. ಪ್ರದೀಪ್ ಅವರಿಗೆ ಪತ್ನಿ ಹಾಗೂ ಮಗ ಇದ್ದಾರೆ.

ADVERTISEMENT

‘ಮುಖ್ಯವಾಹಿನಿಯ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದ ಪ್ರದೀಪ್, ಕೆಲ ವರ್ಷಗಳಿಂದ ಆನ್‌ಲೈನ್ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿಗೆ ಸಂಬಂಧಿಸಿದಂತೆ ಅವರು ಅನೇಕ ಬೆದರಿಕೆಗಳನ್ನು ಎದುರಿಸುತ್ತಿದ್ದರು’ ಎಂದು ಪ್ರದೀಪ್ ಕುಟುಂಬ ಮತ್ತು ಸ್ನೇಹಿತರು ಆರೋಪಿಸಿದ್ದು, ‘ಈ ಹಿನ್ನೆಲೆಯಲ್ಲೇ ಅವರ ಅಪಘಾತ ನಡೆದಿರಬಹುದು’ ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರದೀಪ್ ಅವರ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಪತ್ರಕರ್ತರ ಸಂಘಟನೆಗಳು, ರಾಜಕೀಯ ಪಕ್ಷಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರೂ ಒತ್ತಾಯಿಸಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತ ಅವರ ನೇತೃತ್ವದ ತಂಡ ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.