ಕೋಲ್ಕತ್ತ: ಫಲಿತಾಂಶದ ಬಳಿಕ ಯಾವ ಕಾರ್ಯತಂತ್ರ ಅನುಸರಿಸಬೇಕು ಎಂಬುದನ್ನು ಚರ್ಚಿಸಲು ಇದೇ 21ಕ್ಕೆ ನಡೆಸಲು ಉದ್ದೇಶಿಸಲಾಗಿದ್ದ ಬಿಜೆಪಿ ವಿರೋಧಿ ಪಕ್ಷಗಳ ಸಭೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಈ ಸಭೆ 23ರ ನಂತರ ನಡೆಯಬಹುದು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರೊಬ್ಬರು ಹೇಳಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೂ ಈ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಮತಾ ಅವರ ಜತೆಗೆ ಖರಗ್ ಪುರದಲ್ಲಿ ಮಾತುಕತೆ ನಡೆಸಿದ್ದಾರೆ. ಮಹಾಮೈತ್ರಿಕೂಟದ ಮುಂದಿನ ನಡೆಗಳ ಬಗ್ಗೆ ಅವರು ಚರ್ಚಿಸಿದ್ದಾರೆ ಎನ್ನಲಾಗಿದೆ. ನಾಯ್ಡು ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮಂಗಳವಾರ ದೆಹಲಿಯಲ್ಲಿ ಭೇಟಿಯಾಗಿದ್ದರು. ಈ ಭೇಟಿಯ ಬಗ್ಗೆಯೂ ಮಮತಾ ಅವರೊಂದಿಗೆ ನಾಯ್ಡು ಚರ್ಚಿಸಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಚಲಾವಣೆ ಆಗಿರುವ ಮತ ಪ್ರಮಾಣ, ಗೆಲುವಿನ ಲೆಕ್ಕಾಚಾರ ಮತ್ತು ಮತ ದೃಢೀಕರಣ ರಶೀದಿ ಯಂತ್ರದ ವಿಚಾರದಲ್ಲಿಯೂ ಮಾತುಕತೆ ಆಗಿದೆ. ಅದಕ್ಕೂ ಮೊದಲು ನಾಯ್ಡು ಅವರು ಟಿಎಂಸಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಬಿಜೆಪಿಯ ವಿರುದ್ಧ ಸಂಯುಕ್ತ ರಂಗ ರಚನೆಯ ಪ್ರಸ್ತಾವವನ್ನು ಮೊದಲು ಮುಂದಿಟ್ಟವರು ಮಮತಾ. ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಯಲ್ಲಿ ಮಮತಾ ಮತ್ತು ನಾಯ್ಡು ಅವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.