ADVERTISEMENT

ಸಚಿವ ಸ್ಥಾನ ತೊರೆದ ನಖ್ವಿ, ಆರ್‌ಸಿಪಿ ಸಿಂಗ್‌: ಬಿಜೆಪಿಯಲ್ಲಿ ಮುಸ್ಲಿಂ ಸಂಸದರಿಲ್ಲ

ಪಿಟಿಐ
Published 6 ಜುಲೈ 2022, 14:07 IST
Last Updated 6 ಜುಲೈ 2022, 14:07 IST
ಮುಕ್ತಾರ್‌ ಅಬ್ಬಾಸ್‌ ನಖ್ವಿ
ಮುಕ್ತಾರ್‌ ಅಬ್ಬಾಸ್‌ ನಖ್ವಿ    

ನವದೆಹಲಿ: ಕೇಂದ್ರ ಸಚಿವರಾದ ಮುಕ್ತಾರ್‌ ಅಬ್ಬಾಸ್‌ ನಖ್ವಿ ಮತ್ತು ಆರ್‌ಸಿಪಿ ಸಿಂಗ್‌ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

‘ನಖ್ವಿ ಹಾಗೂ ಸಿಂಗ್‌ ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯು ಗುರುವಾರ ಮುಕ್ತಾಯವಾಗಲಿದೆ. ಹೀಗಾಗಿ ಇಬ್ಬರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ನಖ್ವಿ ಮತ್ತು ಸಿಂಗ್‌ ತಮ್ಮ ಅವಧಿಯಲ್ಲಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಹಿಂದಿನ ಸಂಪುಟ ಸಭೆಯಲ್ಲಿ ಪ್ರಶಂಶಿಸಿದ್ದರು. ಆ ಮೂಲಕ ಇಬ್ಬರ ಪಾಲಿಗೂ ಅದು ಕೊನೆಯ ಸಂಪುಟ ಸಭೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದರು ಎಂದು ಹೇಳಲಾಗಿದೆ.

ADVERTISEMENT

ಬಿಜೆಪಿ ನಾಯಕ ನಖ್ವಿ ರಾಜ್ಯಸಭೆಯ ಉಪನಾಯಕರೂ ಆಗಿದ್ದರು. ಜೆಡಿಯು ಪಕ್ಷದ ಕೋಟಾದಡಿ ಸಿಂಗ್‌ಗೆ ಸಚಿವ ಸ್ಥಾನ ಲಭಿಸಿತ್ತು.

ಬಿಜೆಪಿಯಲ್ಲಿ ಮುಸ್ಲಿಂ ಸಂಸದರಿಲ್ಲ:

ನಖ್ವಿ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಕೊನೆಯಾಗುತ್ತಿರುವುದರಿಂದ ಸದ್ಯ ಬಿಜೆಪಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಂಸದರು ಇಲ್ಲದಂತಾಗಿದೆ.

ಇದಕ್ಕೂ ಮುನ್ನ ಎಂ.ಜೆ.ಅಕ್ಬರ್‌ ಹಾಗೂ ಸೈಯದ್‌ ಜಾಫರ್‌ ಇಸ್ಲಾಂ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಕ್ತಾಯವಾಗಿತ್ತು. ಆದರೆ ಇವರನ್ನು ಮತ್ತೊಂದು ಅವಧಿಗೆ ಸದಸ್ಯರನ್ನಾಗಿ ಮುಂದುವರಿಸಲು ಬಿಜೆಪಿ ನಿರಾಸಕ್ತಿ ತೋರಿತ್ತು.

ಬಿಜೆಪಿಯು ಮುಸ್ಲಿಂ ಸಮುದಾಯದವರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.