ADVERTISEMENT

ನಾರದಾ ಪ್ರಕರಣ: ಜೈಲಲ್ಲೇ ಉಳಿದ ಟಿಎಂಸಿ ಮುಖಂಡರು

ವಿಚಾರಣೆ ಗುರುವಾರಕ್ಕೆ ಮುಂದೂಡಿಕೆ

ಪಿಟಿಐ
Published 19 ಮೇ 2021, 18:38 IST
Last Updated 19 ಮೇ 2021, 18:38 IST
ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ನ ಹೊರಭಾಗದಲ್ಲಿ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು ಪಿಟಿಐ ಚಿತ್ರ
ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ನ ಹೊರಭಾಗದಲ್ಲಿ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು ಪಿಟಿಐ ಚಿತ್ರ   

ಕೋಲ್ಕತ್ತ: ‘ನಾರದಾ’ ಮಾರುವೇಷದ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾವಣೆ ಮಾಡಬೇಕು ಎಂದು ಸಿಬಿಐ ಮಾಡಿರುವ ಮನವಿ ಹಾಗೂ ಕೆಳಹಂತದ ನ್ಯಾಯಾಲಯದ ಜಾಮೀನಿಗೆ ತಡೆ ಯಾಜ್ಞೆ ನೀಡಿದ್ದ ಹೈಕೋರ್ಟ್‌ನ ತೀರ್ಪನ್ನು ಹಿಂಪಡೆಯಬೇಕು ಎಂದು ಆರೋಪಿಗಳು ಮಾಡಿರುವ ಮನವಿಯ ವಿಚಾರಣೆಯನ್ನು ಕೋಲ್ಕತ್ತ ಹೈಕೋರ್ಟ್‌ ಗುರುವಾರಕ್ಕೆ ಮುಂದೂಡಿದೆ.

ಇದರಿಂದಾಗಿ, ಪಶ್ಚಿಮ ಬಂಗಾ ಳದ ಸಚಿವರಾದ ಸುಬ್ರತ ಮುಖರ್ಜಿ, ಫಿರ್ಹಾದ್‌ ಹಕೀಮ್‌, ಶಾಸಕ ಮದನ್‌ ಮಿತ್ರ ಹಾಗೂ ಮಾಜಿ ಮೇಯರ್‌ ಸೋವನ್ ಮುಖರ್ಜಿ ಅವರು ಗುರುವಾರದವರೆಗೆ ಜೈಲಿನಲ್ಲಿ ಉಳಿಯುವಂತಾಗಿದೆ.

ನಾರದಾ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿಗಳಾಗಿರುವ ಇವರನ್ನು ಸಿಬಿಐ ಸೋಮವಾರ ಬಂಧಿಸಿತ್ತು. ಅದೇದಿನ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ
ಜಾಮೀನು ನೀಡಿತ್ತು. ಆದರೆ ರಾತ್ರಿ ವೇಳೆಗೆ ಈ ಜಾಮೀನಿಗೆ ತಡೆಯಾಜ್ಞೆ ನೀಡಿದಹೈಕೋರ್ಟ್‌, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ADVERTISEMENT

ವಿಚಾರಣೆ ವರ್ಗಾವಣೆಗೆ ಮನವಿ: ಬಂಧನಕ್ಕೆ ಒಳಗಾಗಿರುವ ನಾಲ್ವರೂ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ಅವರು ಸಾಕ್ಷಿದಾರರನ್ನು ಬೆದರಿಸುವ ಮತ್ತು ಇಡೀ ವ್ಯವಸ್ಥೆಯ
ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪ್ರಕರಣವನ್ನು ವಿಶೇಷ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಸಿಬಿಐ ಮನವಿ ಮಾಡಿದೆ.

‘ಈ ನಾಲ್ವರ ಬಂಧನವಾದ ಕೂಡಲೇ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬೆಳವಣಿಗೆಗಳು ನಡೆದಿವೆ. ರಾಜ್ಯದ ಮುಖ್ಯಮಂತ್ರಿ,
ಕಾನೂನು ಸಚಿವರು ಹಾಗೂ ಇತರ ಕೆಲವು ಜನಪ್ರತಿ ನಿಧಿಗಳು ಅಂದು ನಡೆದುಕೊಂಡ ರೀತಿ ಮತ್ತು ಸಿಬಿಐ ಕಚೇರಿಯ ಮುಂದೆ ಸೇರಿದ್ದ ಜನರ ವರ್ತನೆಯನ್ನು ನೋಡಿದರೆ ಈ ಆರೋಪಿಗಳು ಎಷ್ಟು ಪ್ರಭಾವಿಗಳು ಎಂಬುದು ಸ್ಪಷ್ಟವಾಗು
ತ್ತದೆ’ ಎಂದು ಸಿಬಿಐ ಪರವಾಗಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಆರೋಪಿಗಳ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ಅಂದು ನಡೆದ ಪ್ರತಿಭಟನೆಗಳು ಪ್ರಜಾಸತ್ತಾತ್ಮಕವಾಗಿದ್ದವು. ಅದರಿಂದ ಕಾನೂನು ಮತ್ತು ವಿಚಾರಣಾ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗಿಲ್ಲ. ಮುಖ್ಯಮಂತ್ರಿಯಾಗಲಿ ಇತರ ಸಚಿವರೇ ಆಗಲಿ ಪ್ರತಿಭಟನೆಗೆ ಕುಮ್ಮಕ್ಕು ನೀಡಲಿಲ್ಲ. ಬದಲಿಗೆ, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು’
ಎಂದರು.

‘ಆರೋಪಿಗಳು ತನಿಖೆಗೆ ಪೂರ್ಣ ಸಹಕಾರ ನೀಡಿದ್ದರೂ ಅವರನ್ನು ಬಂಧಿಸಿರುವುದರ ಉದ್ದೇಶವೇನು, ತನಿಖಾ ಸಂಸ್ಥೆಯು ಆರೋಪಿಗಳ ವಿರುದ್ಧ ಸೋಮವಾರವೇ ಆರೋಪಪಟ್ಟಿಯನ್ನು ಸಲ್ಲಿಸಿರುವುದರಿಂದ ಅವರನ್ನು ಬಂಧನದಲ್ಲಿಡುವ ಅಗತ್ಯವೇನು’ ಎಂದು ಸಿಂಘ್ವಿ
ಪ್ರಶ್ನಿಸಿದರು.

ಸಿ.ಎಂ, ಕಾನೂನು ಸಚಿವ ಪ್ರತಿವಾದಿಗಳು

ಪ್ರಕರಣದ ವಿಚಾರಣೆಯನ್ನು ವರ್ಗಾವಣೆ ಮಾಡುವಂತೆ ಹೈಕೋರ್ಟ್‌ಗೆ ಸಿಬಿಐ ಸಲ್ಲಿಸಿದ ಅರ್ಜಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾನೂನು ಸಚಿವ ಮೊಲೊಯ್‌ ಘಟಕ್‌ ಹಾಗೂ ಟಿಎಂಸಿ ಸಂಸದ, ವಕೀಲ ಕಲ್ಯಾಣ್‌ ಬ್ಯಾನರ್ಜಿ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಲ್‌ ಹಾಗೂ ನ್ಯಾಯಮೂರ್ತಿ ಅರಿಜೀತ್‌ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆಯನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.