ಲಖನೌ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೊತೆಯಾಗಿ ನಡೆಯುತ್ತ ಮಾತಿಗಿಳಿದಿರುವ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿವೆ. ಹೆಗಲ ಮೇಲೆ ಕೈಯಿಟ್ಟಿರುವ ಪ್ರಧಾನಿ ಮೋದಿ, ಅವರ ಮಾತುಗಳಿಗೆ ಯೋಗಿ ಆದಿತ್ಯನಾಥ್ ಕಿವಿಗೊಟ್ಟಿರುವುದನ್ನು ಈ ಫೋಟೊಗಳಲ್ಲಿ ಕಾಣಬಹುದಾಗಿದೆ.
ಉಭಯ ನಾಯಕರ ನಡುವಿನ ಬಾಂಧವ್ಯ, ಬೆಸುಗೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಯೋಗಿ ಆದಿತ್ಯನಾಥ್ ಅವರ ಟ್ವಿಟರ್ ಖಾತೆಯಲ್ಲಿ ಈ ಫೋಟೊಗಳನ್ನು ಹಂಚಿಕೊಳ್ಳಲಾಗಿದ್ದು, 'ನಮ್ಮ ತನು–ಮನವನ್ನು ಅರ್ಪಿಸುವ ಪ್ರಮಾಣದೊಂದಿಗೆ ನಾವು ಮುಂದುವರಿದಿದ್ದೇವೆ. ಹೊಸ ಸೂರ್ಯನನ್ನು ಉದಯಿಸುವ ಬದ್ಧತೆಯೊಂದಿಗೆ, ಆಕಾಶಕ್ಕಿಂತಲೂ ಎತ್ತರಕೆ ಏರುತ್ತ–ಹೊಸ ಭಾರತವನ್ನು ಕಟ್ಟಲು' ಎಂಬರ್ಥದ ಸಾಲುಗಳನ್ನು ಪ್ರಕಟಿಸಿದ್ದಾರೆ.
ಇತ್ತೀಚೆಗೆ ಪೂರ್ವಾಂಚಲ ಎಕ್ಸ್ಪ್ರೆಸ್ವೇ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಗಾವಲು ಪಡೆಯೊಂದಿಗೆ ಮುಂದೆ ಸಾಗಿದರೆ, ಯೋಗಿ ಆದಿತ್ಯನಾಥ್ ಅವರು ಒಂಟಿಯಾಗಿ ನಡೆಯುತ್ತ ಸಾಗುತ್ತಿರುವ ಫೋಟೊ ಚರ್ಚೆಗೆ ಗ್ರಾಸವಾಗಿತ್ತು.
ಹಲವು ರಾಜಕೀಯ ನಾಯಕರು ಆ ಚಿತ್ರವನ್ನು ಟ್ವೀಟಿಸಿ, ವ್ಯಂಗ್ಯವಾಡಿದ್ದರು. ಮುಖ್ಯಮಂತ್ರಿಗೆ ಅವಮಾನ ಮಾಡಲಾಗಿದೆ ಎಂದೆಲ್ಲ ಪ್ರತಿಕ್ರಿಯಿಸಲಾಗಿತ್ತು. ಅವುಗಳಿಗೆ ಉತ್ತರವಾಗಿ ಈ ಚಿತ್ರವನ್ನು ಯೋಗಿ ಆದಿತ್ಯನಾಥ್ ಪ್ರಕಟಿಸಿರುವುದಾಗಿಯೂ ವಿಶ್ಲೇಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.