ADVERTISEMENT

ಕಾಂಗ್ರೆಸ್‌ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ‘ಅಸಮರ್ಥ’ರಾಗಿದ್ದರು: ಪ್ರಣವ್

ಮೋದಿ ಅವರದ್ದು ನಿರಂಕುಶ ಶೈಲಿಯ ಕಾರ್ಯವೈಖರಿ ಎಂದ ಮಾಜಿ ರಾಷ್ಟ್ರಪತಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 2:59 IST
Last Updated 12 ಡಿಸೆಂಬರ್ 2020, 2:59 IST
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ನಿರಂಕುಶ ಶೈಲಿಯ ಕಾರ್ಯವೈಖರಿ’ಯನ್ನು ಪ್ರಯೋಗಿಸಿದರೆ, ಮನ ಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಯುಪಿಎಯನ್ನು ಉಳಿಸುವುದರಲ್ಲೇ ‘ತಲ್ಲೀನ’ರಾಗಿದ್ದುದು ಆಡ ಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಲೋಕಸಭೆ ಚುನಾವಣೆಗೂ ಮುನ್ನ (2014) ರಾಜಕೀಯ ಗುರಿ ಕಳೆದುಕೊಂಡಿದ್ದ ಕಾಂಗ್ರೆಸ್‌ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ ‘ಅಸಮರ್ಥ’ರಾಗಿದ್ದರು ಎಂದು ರಾಷ್ಟ್ರಪತಿಯಾಗಿದ್ದ ಪ್ರಣವ್‌ ಮುಖರ್ಜಿಯವರು ಬರೆದಿದ್ದಾರೆ.

ದಿವಂಗತ ಮುಖರ್ಜಿ ಅವರು ತಮ್ಮ ಆತ್ಮಕಥೆಯ ನಾಲ್ಕನೇ ಭಾಗ ‘ದಿ ಪ್ರೆಸಿಡೆನ್ಷಿಯಲ್ಇಯರ್ಸ್‌–2012–2017’ ಕೃತಿಯಲ್ಲಿ ಮೋದಿ, ಮನ ಮೋಹನ್‌ ಸಿಂಗ್‌ ಹಾಗೂ ಸೋನಿಯಾ ಗಾಂಧಿ ಅವರ ಕಾರ್ಯವೈಖರಿಯನ್ನು ಈ ರೀತಿ ಅಳೆದು ತೂಗಿದ್ದಾರೆ. ರೂಪಾ ಪ್ರಕಾಶನವು ಪ್ರಕಟಿಸಿರುವ ಈ ಕೃತಿ ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ. ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿನ ವಿದ್ಯಮಾನಗಳ ಬಗ್ಗೆ ಈ ಕೃತಿಯಲ್ಲಿ ಉಲ್ಲೇಖವಿದೆ.

ನಾನು ಪ್ರಧಾನಿ ಆಗಿದ್ದರೆ ಕಾಂಗ್ರೆಸ್‌ ಸೋಲುತ್ತಿರಲಿಲ್ಲ: ಪಕ್ಷದ ನಾಯಕತ್ವ ವನ್ನು ಕೆಲ ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿರುವ ಹಾಗೂ ಹೆಚ್ಚಿನ ಅವಧಿಗೆ ಸೋನಿಯಾ ಅವರು ಅಧ್ಯಕ್ಷ ರಾಗಿ ಮುಂದುವರಿಯುವುದಿಲ್ಲ ಎನ್ನುವ ಸೂಚನೆಗಳು ದೊರೆ ಯುತ್ತಿರುವ ವೇಳೆಯ, ‘ಕಾಂಗ್ರೆಸ್‌ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ ‘ಅಸಮರ್ಥ’ ರಾಗಿದ್ದರು’ ಎನ್ನುವ ಮುಖರ್ಜಿ ಅವರ ಅಭಿಪ್ರಾಯ ಹೊರಬಿದ್ದಿದೆ.

ADVERTISEMENT

2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕೇವಲ 44 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ನ ಹೀನಾಯ ಸ್ಥಿತಿಯ ಬಗ್ಗೆಯೂ ಕೃತಿಯಲ್ಲಿ ಮುಖರ್ಜಿ ಅವರು ಉಲ್ಲೇಖಿಸಿದ್ದಾರೆ.

‘2004ರಲ್ಲಿ ನಾನು ಪ್ರಧಾನಿಯಾಗಿದ್ದರೆ, 2014ರ ಲೋಕಸಭೆಯಲ್ಲಿ ಪಕ್ಷಕ್ಕೆ ಆಗಿದ್ದ ಸೋಲನ್ನು ತಡೆಯಬಹು ದಿತ್ತು ಎಂಬುದು ಕಾಂಗ್ರೆಸ್‌ನ ಕೆಲ ಸದಸ್ಯರ ಅಭಿಪ್ರಾಯವಾಗಿತ್ತು. ಈ ಆಲೋಚನೆಯನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ನನ್ನನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ ಮೇಲೆ ಪಕ್ಷದ ನಾಯಕತ್ವವು ರಾಜಕೀಯ ಗುರಿಯನ್ನು ಕಳೆದುಕೊಂಡಿತು’ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.