ಭೋಪಾಲ್: ಮಧ್ಯಪ್ರದೇಶದ ಸಚಿವೆ ಇಮಾರ್ತಿ ದೇವಿ ಅವರನ್ನು ‘ಐಟಂ’ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಈ ಕುರಿತು ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ವಿಷಾದವ್ಯಕ್ತಪಡಿಸಿದ್ದಾರೆ.
‘ನಾನು ಯಾವುದೇ ಅಗೌರವ ತೋರಿಲ್ಲ. ಹೀಗಾಗಿ ಕ್ಷಮೆಯಾಚಿಸುವುದಿಲ್ಲ’ ಎಂದೂ ಕಮಲನಾಥ್ ತಿಳಿಸಿದ್ದಾರೆ.
‘ಲೋಕಸಭೆಯಲ್ಲಿ ಅಥವಾ ವಿಧಾನಸಭೆಯಲ್ಲಿ ನಾನು ‘ಐಟಂ’ ಎಂಬ ಪದ ಬಳಸಿಲ್ಲ. ಆದರೆ, ಮಧ್ಯಪ್ರದೇಶದಲ್ಲಿ ಮುಂಬರುವ ನ.3ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಈ ವಿಷಯನ್ನು ಇಟ್ಟುಕೊಂಡು ಜನರ ದಾರಿತಪ್ಪಿಸುತ್ತಿದೆ. ನಾನು ಯಾರಿಗೂ ಅಗೌರವ ತೋರಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ. ನಾನು ಬಳಸಿದ ಪದ ಅಗೌರವ ಎಂದು ಎನಿಸಿದರೆ ನಾನು ವಿಷಾದಿಸುತ್ತೇನೆ’ ಎಂದು ಕಮಲನಾಥ್ ತಿಳಿಸಿದರು.
ವಿಷಾದನೀಯವಾದ ಮಾತು: ರಾಹುಲ್ ಗಾಂಧಿ
ವಯನಾಡ್ (ಕೇರಳ): ಕಮಲನಾಥ್ ಹೇಳಿಕೆಯನ್ನು ವಿರೋಧಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಸಚಿವೆ ಇಮಾರ್ತಿ ದೇವಿ ಅವರನ್ನು ಐಟಂ ಎಂದು ಕರೆದಿರುವುದು ವಿಷಾದನೀಯ. ಮಹಿಳೆಯರ ಬಗ್ಗೆ ಯಾರೂ ಅಗೌರವ ತೋರಬಾರದು. ಕಮಲನಾಥ್ ಅವರು ನಮ್ಮ ಪಕ್ಷದವರು. ಆದರೆ ನಾನು ಅಂಥ ಭಾಷೆಯನ್ನು ಇಷ್ಟಪಡುವುದಿಲ್ಲ. ಇದನ್ನು ನಾನು ಪ್ರೋತ್ಸಾಹಿಸುವುದಿಲ್ಲ. ನಮ್ಮ ಮಹಿಳೆಯರು ನಮ್ಮ ಹೆಮ್ಮೆ. ಅವರನ್ನು ನಾವು ರಕ್ಷಿಸಬೇಕು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.