
ನವದೆಹಲಿ: ‘ದೇಶದ ಪ್ರಗತಿಗೆ ಹೊಸ ಶಕ್ತಿ ತುಂಬಲು ವಿಕಸಿತ ಭಾರತ, ಆತ್ಮ ನಿರ್ಭರ, ಸ್ವದೇಶಿ ಮುಂತಾದ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಸಂಸದರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ನಿಲ್ಲಬೇಕು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಸಲಹೆ ನೀಡಿದರು.
ಬಜೆಟ್ ಅಧಿವೇಶನದ ಮೊದಲ ದಿನ ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಸುಮಾರು ಒಂದು ಗಂಟೆ ಭಾಷಣ ಮಾಡಿದ ಅವರು, ‘ವಿವಿಧ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ’ ಎಂದು ಪ್ರತಿಪಾದಿಸಿದರು.
ಸುಮಾರು 6,000 ಪದಗಳ ಅವರ ಭಾಷಣವು ರವೀಂದ್ರನಾಥ ಟ್ಯಾಗೋರ್, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ (ಪಶ್ಚಿಮ ಬಂಗಾಳ), ಶ್ರೀ ನಾರಾಯಣ ಗುರು (ಕೇರಳ), ಭೂಪೇನ್ ಹಜಾರಿಕಾ (ಅಸ್ಸಾಂ), ರಾಜೇಂದ್ರ ಚೋಳ ಮತ್ತು ತಿರುವಳ್ಳುವರ್ (ತಮಿಳುನಾಡು) ಸೇರಿದಂತೆ ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳ ಮಹಾನ್ ಸಾಧಕರ ಉಲ್ಲೇಖಗಳನ್ನು ಹೊಂದಿತ್ತು ಹಾಗೂ ಆ ರಾಜ್ಯಗಳಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳ ಪ್ರಸ್ತಾಪಗಳನ್ನು ಒಳಗೊಂಡಿತ್ತು.
ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ‘ಆಪರೇಷನ್ ಸಿಂಧೂರ’ವನ್ನು ಶ್ಲಾಘಿಸಿದ ಅವರು, ‘ಈ ಮೂಲಕ, ಯಾವುದೇ ಭಯೋತ್ಪಾದನಾ ದಾಳಿಗೆ ದೃಢ ಹಾಗೂ ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂಬ ಬಲವಾದ ಸಂದೇಶ ರವಾನಿಸಲಾಗಿದೆ’ ಎಂದರು.
ಸಾಮಾಜಿಕ ನ್ಯಾಯ, ಕೃಷಿ, ಮೂಲಸೌಕರ್ಯ, ಶಿಕ್ಷಣ ಮತ್ತು ಕೈಗಾರಿಕೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾವೋವಾದಿಗಳ ವಿರುದ್ಧದ ಕ್ರಮವನ್ನೂ ಶ್ಲಾಘಿಸಿದರು. ಅವರ ಭಾಷಣವು, ‘ಸೋಮನಾಥ ದೇವಾಲಯದ ಮೇಲಿನ ದಾಳಿಯ ನಂತರದ ಸಾವಿರ ವರ್ಷಗಳ ಪಯಣ’, ಸ್ವಾತಂತ್ರ್ಯದ ನಂತರದ ನಿರ್ಲಕ್ಷ್ಯ ಸೇರಿದಂತೆ ಆಡಳಿತಾರೂಢ ಬಿಜೆಪಿಯ ನೆಚ್ಚಿನ ವಿಷಯಗಳ ಬಗ್ಗೆಯೂ ಉಲ್ಲೇಖಗಳನ್ನು ಹೊಂದಿತ್ತು.
ಕೃತಕ ಬುದ್ಧಿಮತ್ತೆಯ ದುರುಪಯೋಗದಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ರಾಷ್ಟ್ರಪತಿ ಎಚ್ಚರಿಕೆ ನೀಡಿದರು. ‘ಡೀಪ್ ಫೇಕ್, ತಪ್ಪು ಮಾಹಿತಿ ಮತ್ತು ನಕಲಿ ವಿಷಯಗಳು ಪ್ರಜಾಪ್ರಭುತ್ವ, ಸಾಮಾಜಿಕ ಸಾಮರಸ್ಯ ಮತ್ತು ಸಾರ್ವಜನಿಕ ನಂಬಿಕೆಗೆ ಗಮನಾರ್ಹ ಬೆದರಿಕೆಯಾಗುತ್ತಿವೆ ಮತ್ತು ಈ ಗಂಭೀರ ವಿಷಯದ ಬಗ್ಗೆ ಸಂಸದರೆಲ್ಲರೂ ಚರ್ಚಿಸುವುದು ಅತ್ಯಗತ್ಯ‘ ಎಂದು ಹೇಳಿದರು.
‘ವಿಕಸಿತ ಭಾರತದ ಗುರಿ ಯಾವುದೇ ಒಂದು ಸರ್ಕಾರ ಅಥವಾ ಒಂದು ಪೀಳಿಗೆಗೆ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.