ADVERTISEMENT

ಶರಣಾಗತಿಗೆ 2 ವಾರ ಕಾಲಾವಕಾಶ ಕೋರಿ ಸಿಧು ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪಿಟಿಐ
Published 20 ಮೇ 2022, 7:22 IST
Last Updated 20 ಮೇ 2022, 7:22 IST
ನವಜೋತ್ ಸಿಂಗ್ ಸಿಧು: ಪಿಟಿಐ ಚಿತ್ರ 
ನವಜೋತ್ ಸಿಂಗ್ ಸಿಧು: ಪಿಟಿಐ ಚಿತ್ರ    

ನವದೆಹಲಿ: 1988ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿರುವ ಪಂಜಾಬ್‌ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರು, ಶರಣಾಗತಿಗೆ ‌ಎರಡು ವಾರ ಕಾಲಾವ‌ಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಗುರುವಾರ ಸಿಧು ಅವರಿಗೆ 1 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್, ‘ಅಪರಾಧಿಗೆ ಶಿಕ್ಷೆ ವಿಧಿಸುವಾಗ ತೋರುವ ಯಾವುದೇ ಅನುಚಿತ ಸಹಾನುಭೂತಿಯು ನ್ಯಾಯ ವ್ಯವಸ್ಥೆಗೆ ಹೆಚ್ಚು ಹಾನಿ ಮಾಡುತ್ತದೆ ಮತ್ತು ಕಾನೂನಿನ ಪರಿಣಾಮದ ಬಗ್ಗೆ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ’ಎಂದು ಹೇಳಿತ್ತು.

ಸಿಧು ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಸಿಧು ಅವರ ಶರಣಾಗತಿಗೆ ಎರಡು ವಾರ ಕಾಲ ಅವಕಾಶ ನೀಡಬೇಕೆಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಕರ್ ಪೀಠದ ಮುಂದೆ ಮನವಿ ಸಲ್ಲಿಸಿದರು.

ADVERTISEMENT

‘ಅವರು(ಸಿಧು) ಶೀಘ್ರದಲ್ಲೇ ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ. 34 ವರ್ಷಗಳ ನಂತರ ಈ ತೀರ್ಪು ಬಂದಿದೆ. ಅವರು ತಮ್ಮ ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಕೆಲವು ತಯಾರಿ ಮಾಡಿಕೊಳ್ಳಬೇಕಿರುವುದರಿಂದ ಎರಡು ವಾರ ಕಾಲಾವಕಾಶದ ಅಗತ್ಯವಿದೆ’ಎಂದು ಸಿಂಘ್ವಿ ಮನವಿಯಲ್ಲಿ ತಿಳಿಸಿದ್ದಾರೆ.

‘ಸಿಧು ಮನವಿ ಆಲಿಸಿದ ಸುಪ್ರೀಂ ಕೋರ್ಟ್‌ ಪೀಠವು, ನೀವು ಈ ಅರ್ಜಿಯನ್ನು ಮುಖ್ಯ ನ್ಯಾಯಾಧೀಶರ ಮುಂದೆ ಸಲ್ಲಿಸಬಹುದು. ಮುಖ್ಯ ನ್ಯಾಯಮೂರ್ತಿಗಳು ಇಂದು ಪೀಠವನ್ನು ರಚಿಸಿದರೆ, ನಾವು ಅದನ್ನು ಪರಿಗಣಿಸುತ್ತೇವೆ’ಎಂದು ಅಭಿಪ್ರಾಯಪಟ್ಟಿದೆ.

ಬಳಿಕ, ಮುಖ್ಯ ನ್ಯಾಯಮೂರ್ತಿಗಳ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸುವುದಾಗಿ ಸಿಂಘ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.