ಜಮ್ಮು: ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಇಬ್ಬರು ಪ್ರಮುಖ ನಾಯಕರಾದ ದೇವೇಂದರ್ ರಾಣಾ ಮತ್ತು ಸುರ್ಜಿತ್ ಸಿಂಗ್ ಸ್ಲಾಥಿಯಾ ಅವರು ಭಾನುವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಇಬ್ಬರು ನಾಯಕರು ಸೋಮವಾರ ದೆಹಲಿಯಲ್ಲಿ ಬಿಜೆಪಿಗೆ ಸೇರುವ ಸಾಧ್ಯತೆಗಳಿವೆ. ಈ ಬೆಳವಣಿಗೆಯಿಂದಾಗಿ ನ್ಯಾಷನಲ್ ಕಾನ್ಫರೆನ್ಸ್ಗೆ ತೀವ್ರ ಹಿನ್ನಡೆಯಾಗಿದೆ.
‘ಸ್ಲಾಥಿಯಾ ಮತ್ತು ರಾಣಾ ಅವರ ರಾಜೀನಾಮೆ ಪತ್ರಗಳನ್ನು ಡಾ.ಫಾರೂಕ್ ಅಬ್ದುಲ್ಲಾ ಸ್ವೀಕರಿಸಿದ್ದು, ಅಂಗೀಕರಿಸಿದ್ದಾರೆ. ಈ ಸಂಬಂಧ ಯಾವುದೇ ಕ್ರಮ ಅಥವಾ ಪ್ರತಿಕ್ರಿಯೆ ಅಗತ್ಯವಿಲ್ಲ’ ಎಂದು ನ್ಯಾಷನಲ್ ಕಾನ್ಫರೆನ್ಸ್ ವಕ್ತಾರರು ಟ್ವೀಟ್ ಮಾಡಿದ್ದಾರೆ.
ರಾಣಾ ಅವರು ನ್ಯಾಷನಲ್ ಕಾನ್ಫರೆನ್ಸ್ನ ಜಮ್ಮು ವಲಯ ಘಟಕದ ಅಧ್ಯಕ್ಷರಾಗಿದ್ದರು. ರಾಜೀನಾಮೆ ನೀಡಿ, ಬಿಜೆಪಿ ಸೇರುವರು ಎಂದು ಹಲವು ದಿನಗಳಿಂದ ವದಂತಿ ಇತ್ತು. ಭಾನುವಾರ ಸ್ವತಃ ರಾಜೀನಾಮೆ ತೀರ್ಮಾನ ಪ್ರಕಟಿಸುವ ಮೂಲಕ ರಾಣಾ ತೆರೆ ಎಳೆದಿದ್ದರು.
‘ನಾನು ಮತ್ತು ಪಕ್ಷದ ಹಿರಿಯ ಸಹೋದ್ಯೋಗಿ ಎಸ್.ಎಸ್.ಸ್ಲಾಥಿಯಾ ನ್ಯಾಷನಲ್ ಕಾನ್ಫರೆನ್ಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದ್ದರು. ರಾಣಾ ಅವರು, ಕೇಂದ್ರದ ಮಾಜಿ ಸಚಿವ ಜಿತೇಂದ್ರ ಸಿಂಗ್ ಅವರ ತಮ್ಮ.
‘ತಮ್ಮ ರಾಜಕೀಯ ಸಿದ್ಧಾಂತ, ಧ್ಯೇಯವು ಉದ್ದೇಶಿತ ‘ಜಮ್ಮು ಘೋಷಣೆ’ಯನ್ನು ಆಧರಿಸಿರುತ್ತದೆ’ ಎಂದು ಹೇಳಿದರು. ‘ಅವರು ಜನವರಿ 30ರಂದು ಜಮ್ಮು ಘೋಷಣೆ ಪ್ರಕಟಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ವಿವಿಧ ಸಮುದಾಯಗಳ ನಡುವೆ ಪರಸ್ಪರ ವಿಶ್ವಾಸವನ್ನು ಮೂಡಿಸುವುದು ಉಲ್ಲೇಖಿತ ಜಮ್ಮು ಘೋಷಣೆಯ ಗುರಿಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.