ಪ್ರಾತಿನಿಧಿಕ ಚಿತ್ರ
ಚೆನ್ನೈ: ಇಲ್ಲಿನ ಬಸ್ ನಿಲ್ದಾಣವೊಂದರಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ₹27 ಕೋಟಿ ಮೌಲ್ಯದ 2.8 ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಶ್ರೀಲಂಕಾ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾದಕವಸ್ತು ನಿಯಂತ್ರಣ ಘಟಕವು (ಎನ್ಸಿಬಿ) ತಿಳಿಸಿದೆ.
ಘಟನೆ ಸಂಬಂಧ ಇತರೆ ₹15 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಚೇರಿ ಹೇಳಿದೆ.
ಎನ್ಸಿಬಿ ಚೆನ್ನೈ ಘಟಕಕ್ಕೆ ದೊರೆತ ಸುಳುವಿನ ಮೇರೆಗೆ, ಇಲ್ಲಿನ ಬಸ್ ನಿಲ್ದಾಣವೊಂದರ ಬಳಿ ವಿಜಯ್ ಕುಮಾರ್ ಮತ್ತು ಮಣಿವಣ್ಣನ್ ಎಂಬ ಇಬ್ಬರು ವ್ಯಕ್ತಿಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ 1.9 ಕೆ.ಜಿ ಡ್ರಗ್ಸ್ ಪತ್ತೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯ್ ಕುಮಾರ್ ಎಂಬಾತ ಶ್ರೀಲಂಕಾ ಮೂಲದ ಪ್ರಜೆಯಾಗಿದ್ದು ಕನ್ಯಾಕುಮಾರಿಯ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಶ್ರೀಲಂಕಾಕ್ಕೆ ಡ್ರಗ್ಸ್ ಸಾಗಿಸುವ ಸಲುವಾಗಿ ಚೆನ್ನೈಗೆ ಬಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ಕುರಿತು ಹೆಚ್ಚಿನ ಶೋಧ ನಡೆಸಿದ ಅಧಿಕಾರಿಗಳು ಮಣಿವಣ್ಣನ್ ಅವರ ನಿವಾಸದಲ್ಲಿ ಹೆಚ್ಚುವರಿ 900 ಗ್ರಾಂ ಡ್ರಗ್ಸ್ ಮತ್ತು ₹15 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಈ ಮಾದಕವಸ್ತು ಕಳ್ಳಸಾಗಣೆ ಜಾಲದ ಸಂಪರ್ಕಗಳನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.