ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ಇತ್ತೀಚೆಗೆ ಪ್ರಕಟಿಸಿರುವ ವಿಶೇಷ ಪಠ್ಯದ ಮಾದರಿ ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಮಂಗಳವಾರ ಪ್ರತಿಭಟನೆ ನಡೆಸಿತು.
ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿದ ಎನ್ಎಸ್ಯುಐ, ‘ಬಿಜೆಪಿ, ಆರ್ಎಸ್ಎಸ್ ಸೇರಿ ಎನ್ಸಿಇಆರ್ಟಿ ಪಠ್ಯ ಮಾದರಿಯನ್ನು ತಿರುಚಿವೆ’ ಎಂದು ಆರೋಪಿಸಿತು. ಭಾರತೀಯ ಸ್ವಾತಂತ್ರ್ಯ ಹೋರಾಟದ ನೈಜ ಪರಂಪರೆಯನ್ನು ರಕ್ಷಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಎನ್ಸಿಇಆರ್ಟಿಯು ‘ದೇಶ ವಿಭಜನೆಯ ಕರಾಳ ದಿನ’ ಎಂಬ ವಿಶೇಷ ಪಠ್ಯ ಮಾದರಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ‘ಭಾರತ ವಿಭಜನೆಗೆ ಕಾಂಗ್ರೆಸ್, ಮಹಮ್ಮದ್ ಅಲಿ ಜಿನ್ನಾ ಮತ್ತು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರೇ ಕಾರಣ’ ಎಂದು ಉಲ್ಲೇಖಿಸಿದೆ.
ಎನ್ಎಸ್ಯುಐ ರಾಷ್ಟ್ರೀಯ ಅಧ್ಯಕ್ಷ ವರುಣ್ ಚೌಧರಿ, ‘ಭಾರತದ ಇತಿಹಾಸವನ್ನು ಸುಳ್ಳು ಮತ್ತು ದ್ವೇಷದಿಂದ ಬರೆಯಲು ಸಾಧ್ಯವಿಲ್ಲ. ಭಾರತವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ, ‘ಇವರು’ ಬ್ರಿಟಿಷರ ಪರ ಇದ್ದರು’ ಎಂದು ಹೇಳಿದರು.
‘ಅದೇ ದೇಶದ್ರೋಹಿಗಳು ಇಂದು ಸುಳ್ಳು ಕತೆ ಕಟ್ಟಿ ಗಾಂಧಿ, ನೆಹರೂ ಮತ್ತು ಸರ್ದಾರ್ ಪಟೇಲ್ ಅವರನ್ನು ದೂರುತ್ತಿದ್ದಾರೆ. ದೇಶದ ಮುಗ್ಧ ಮಕ್ಕಳು ಆರ್ಎಸ್ಎಸ್ ಮತ್ತು ಬಿಜೆಪಿಯ ತಿರುಚಿದ ಇತಿಹಾಸ ಓದಿ, ಸಂತ್ರಸ್ತರಾಗಲು ಅವಕಾಶ ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.