ADVERTISEMENT

ಪವಾರ್ ವಿರುದ್ಧ ಟ್ವೀಟ್: ಎನ್‌ಸಿಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 10:58 IST
Last Updated 9 ಜೂನ್ 2023, 10:58 IST
ಮುಂಬೈನ ಆಜಾದ್ ಮೈದಾನದಲ್ಲಿ ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ಚಿತ್ರ–ಪಿ‌ಟಿಐ
ಮುಂಬೈನ ಆಜಾದ್ ಮೈದಾನದಲ್ಲಿ ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ಚಿತ್ರ–ಪಿ‌ಟಿಐ    

ಮುಂಬೈ (ಪಿಟಿಐ): ಶರದ್ ಪವಾರ್ ಅವರನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ‘ಅವತಾರ’ ಎಂದು ಬಣ್ಣಿಸಿರುವುದನ್ನು ವಿರೋಧಿಸಿ ಎನ್‌ಸಿಪಿ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು. 

ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ಹಿರಿಯ ಪುತ್ರ, ಬಿಜೆಪಿ ಮುಖಂಡ  ನಿಲೇಶ್ ರಾಣೆ ಅವರು, ಬುಧವಾರ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ, ‘ಚುನಾವಣೆ ಸಮೀಪಿಸುತ್ತಿರುವಾಗ ಪವಾರ್ ಸಾಹೇಬರು ಮುಸ್ಲಿಂ ಸಮುದಾಯದ ಬಗ್ಗೆ ಚಿಂತಿತರಾಗಿದ್ದಾರೆ. ಕೆಲವೊಮ್ಮೆ ಶರದ್ ಪವಾರ್ ಔರಂಗಜೇಬನ ಅವತಾರವೆಂಬಂತೆ ತೋರುತ್ತದೆ’ ಎಂದು ಹೇಳಿದ್ದರು. 

ಇದನ್ನು ಖಂಡಿಸಿ ಪಕ್ಷದ ಮುಂಬೈ ಘಟಕದ ಕಾರ್ಯಕಾರಿ ಅಧ್ಯಕ್ಷ ನರೇಂದ್ರ ರಾಣೆ ಆಯೋಜಿಸಿದ್ದ ‘ಮುಂಬೈ ಜೈಲ್ ಭರೋ ಆಂದೋಲನ’ದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆದೊಯ್ದರು.  

ADVERTISEMENT

‘ನಿಲೇಶ್ ರಾಣೆ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಗೊತ್ತು. ಏಕೆಂದರೆ ಸರ್ಕಾರಕ್ಕೆ ಯಾವುದೇ ನೈತಿಕತೆ ಉಳಿದಿಲ್ಲ’ ಎಂದು ಎನ್‌ಸಿಪಿ ವಕ್ತಾರ ಮಹೇಶ್ ತಾಪ್ಸೆ ಹೇಳಿದ್ದಾರೆ.

ಪಕ್ಷದ ವಕ್ತಾರ ಕ್ಲೈಡ್ ಕ್ರಾಸ್ಟೊ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.