ADVERTISEMENT

ಬುಡಕಟ್ಟು ಜನರಿಗೆ ಕಿರುಕುಳ: ತನಿಖೆಗೆ ಎನ್‌ಸಿಎಸ್‌ಟಿ ಸೂಚನೆ

ಪಿಟಿಐ
Published 19 ಜನವರಿ 2020, 20:00 IST
Last Updated 19 ಜನವರಿ 2020, 20:00 IST

ನವದೆಹಲಿ: ಬುಡಕಟ್ಟು ಪ್ರದೇಶದಲ್ಲಿಬಾಂಗ್ಲಾದೇಶಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿರುವುದು ಬುಡಕಟ್ಟು ಜನರ ಮೇಲೆ ಪರಿಣಾಮ ಬೀರಿದೆಯೇ ಎನ್ನುವುದರ ಕುರಿತುತನಿಖೆ ನಡೆಸಲು ಛತ್ತೀಸಗಡ ಸರ್ಕಾರಕ್ಕೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು
(ಎನ್‌ಸಿಎಸ್‌ಟಿ) ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕಳೆದ ತಿಂಗಳು ಆಯೋಗದ ಸದಸ್ಯರು ಛತ್ತೀಸಗಡಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿರಾಜ್ಯದ ಬಸ್ತರ್‌ ಪ್ರದೇಶದಲ್ಲಿ ಬಾಂಗ್ಲಾದೇಶಿ ನಿರಾಶ್ರಿತರು ಬುಡಕಟ್ಟು ಜನರನ್ನು ಅವರ ನೆಲದಿಂದಲೇ ‘ಒಕ್ಕಲೆಬ್ಬಿಸುತ್ತಿದ್ದು’, ಅವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದುಬುಡಕಟ್ಟು ಜನಾಂಗದ ಪ್ರತಿನಿಧಿಗಳು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿತನಿಖೆಗೆ ಸೂಚಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

‘ಸಂವಿಧಾನದ ಪ್ರಕಾರ ಬುಡಕಟ್ಟು ಪ್ರದೇಶವು ವಿಶೇಷ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಆಗುವ ಬದಲಾವಣೆಯು ಬುಡಕಟ್ಟು ಜನರ ಹಕ್ಕಿನ ಮೇಲೆ ಪರಿಣಾಮ ಬೀರಲಿದೆ. ನಿರಾಶ್ರಿತರ ಸಂಖ್ಯೆ ಬುಡಕಟ್ಟು ಜನರ ಸಂಖ್ಯೆ ಮೀರಿದೆಯೇ, ಪುನರ್ವಸತಿ ಕಲ್ಪಿಸಿದ ಸಂದರ್ಭದಲ್ಲಿ ಇದ್ದ ನಿರಾಶ್ರಿತರ ಸಂಖ್ಯೆಯ ಬಗ್ಗೆಯೂ ಸರ್ಕಾರದಿಂದ ವರದಿ ಕೇಳಲಾಗಿದೆ’ ಎಂದು ಆಯೋಗದ ಅಧ್ಯಕ್ಷ ನಂದ ಕುಮಾರ್‌ ಸಾಯಿ ತಿಳಿಸಿದರು.

ADVERTISEMENT

ಬಾಂಗ್ಲಾದೇಶ ವಿಭಜನೆ ಸಂದರ್ಭದಲ್ಲಿ ನಿರಾಶ್ರಿತರಿಗೆ ಸರ್ಕಾರವು ಒಡಿಶಾ, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪುನರ್ವಸತಿ ಕಲ್ಪಿಸಿತ್ತು. ಛತ್ತೀಸಗಡದ ಕನ್ಕೆರ್‌ ಜಿಲ್ಲೆಯ ಬಸ್ತರ್‌ ಪ್ರದೇಶದಲ್ಲೂ ಇವರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.