ನವದೆಹಲಿ: ಪಾಕ್ನ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ‘ವೀರ ಚಕ್ರ’ ಪ್ರಶಸ್ತಿಪ್ರಾಪ್ತವಾಗಿದೆ.
ಸ್ವಾತಂತ್ರ್ಯೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಭಾರತದ ಸಿಆರ್ಪಿಎಫ್ ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನದ ಬಾಳಾಕೋಟ್ನ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ದಾಳಿ ನಡೆಸುವ ಉದ್ದೇಶದಿಂದ ಫೆ.27ರಂದು ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್–16 ಯುದ್ಧ ವಿಮಾನಗಳನ್ನು ಮಿಗ್ 21 ಯುದ್ಧ ವಿಮಾನದ ಮೂಲಕ ವ್ಹಿಂಗ್ ಕಮಾಂಡರ್ ಅಭಿನಂದನ್ ಬೆನ್ನಟ್ಟಿ ಹೋಗಿದ್ದರು. ಈ ಕಾಳಗದಲ್ಲಿ ಅಭಿನಂದನ್ ಅವರು ಪಾಕ್ನ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರಾದರೂ ತಾವಿದ್ದ ವಿಮಾನ ಪತನಗೊಂಡು ಪಾಕಿಸ್ತಾನಕ್ಕೆ ಸೆರೆ ಸಿಕ್ಕಿದ್ದರು. ಅವರನ್ನು ಮಾರ್ಚ್ 1ರ ರಾತ್ರಿ ಪಾಕಿಸ್ತಾನ ಬಿಡುಗಡೆ ಮಾಡಿತ್ತು.
ಹಲವು ಪರೀಕ್ಷೆ, ತಪಾಸಣೆ ಮತ್ತು ವಿಶ್ರಾಂತಿಯ ನಂತರ ಅಭಿನಂದನ್ ಸೇವೆಗೆ ಮರಳಲು ಅವಕಾಶ ಪಡೆದುಕೊಂಡಿದ್ದಾರೆ. ಈ ನಡುವೆ ಅವರಿಗೆ ವೀರ ಚಕ್ರ ಘೋಷಣೆಯಾಗಿದೆ.
ಮಿಂಟಿ ಅಗರ್ವಾಲ್ಗೆ ಯುದ್ಧ ಸೇವಾ ಪದಕ
ಫೆ.27ರಂದು ಪಾಕಿಸ್ತಾನ ಮತ್ತು ಭಾರತದ ಯುದ್ಧ ವಿಮಾನಗಳ ನಡುವೆ ನಡೆದಿದ್ದ ಕಾಳಗದಲ್ಲಿ ಫೈಟರ್ ಕಂಟ್ರೋಲರ್ ಆಗಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ವಾಯು ಸೇನೆಯ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಂಗರ್ವಾಲ್ ಅವರಿಗೆ ಯುದ್ಧ ಸೇವಾ ಪದಕ ಪ್ರದಾನ ಮಾಡಲಾಗುತ್ತಿದೆ.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.