ADVERTISEMENT

15 ಮಂದಿ ಸಾವಿಗೆ ನಿರ್ಲಕ್ಷ್ಯವೇ ಕಾರಣ: ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 19:56 IST
Last Updated 23 ಏಪ್ರಿಲ್ 2021, 19:56 IST
ಅಗ್ನಿ ದುರಂತದ ಬಳಿಕ ವಿಜಯವಲ್ಲಭ ಕೋವಿಡ್‌ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಆರೋಗ್ಯ ಕಾರ್ಯಕರ್ತರು ಬೇರೆಡೆಗೆ ಸ್ಥಳಾಂತರಿಸಿದರು –ಪಿಟಿಐ ಚಿತ್ರ
ಅಗ್ನಿ ದುರಂತದ ಬಳಿಕ ವಿಜಯವಲ್ಲಭ ಕೋವಿಡ್‌ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಆರೋಗ್ಯ ಕಾರ್ಯಕರ್ತರು ಬೇರೆಡೆಗೆ ಸ್ಥಳಾಂತರಿಸಿದರು –ಪಿಟಿಐ ಚಿತ್ರ   

ವಿರಾರ್‌ (ಪಿಟಿಐ): ‘ವಿಜಯವಲ್ಲಭ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತ ಹಾಗೂ 15 ಮಂದಿಯ ಸಾವಿಗೆ ಸಂಪೂರ್ಣವಾಗಿ ಆಸ್ಪತ್ರೆಯ ಆಡಳಿತ ಮಂಡಳಿಯವರೇ ಹೊಣೆ’ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.

‘ಆಸ್ಪತ್ರೆಯ ಆಡಳಿತದವರ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ. ಆಸ್ಪತ್ರೆಯಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಸಹ ಇರಲಿಲ್ಲ. ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಾಗ ಆಸ್ಪತ್ರೆಯ ಸಿಬ್ಬಂದಿಯೆಲ್ಲರೂ ನಿದ್ದೆಯಲ್ಲಿದ್ದರು. ಒಳಗಿದ್ದ ರೋಗಿಗಳನ್ನು ಹೊರತರಲು ಒಬ್ಬನೇ ಒಬ್ಬ ಸಿಬ್ಬಂದಿಯೂ ಇರಲಿಲ್ಲ’ ಎಂದು ಮೃತ ರೋಗಿಯೊಬ್ಬರ ಸಂಬಂಧಿ ಆರೋಪಿಸಿದ್ದಾರೆ.

ತನಿಖೆಗೆ ಆದೇಶ: ‘ಇದು ಅತ್ಯಂತ ನೋವಿನ ಘಟನೆ, ಈ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ’ ಎಂದು ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ADVERTISEMENT

ಮೃತರ ಕುಟುಂಬದವರಿಗೆ ತಲಾ ₹5 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹1 ಲಕ್ಷ ಪರಿಹಾರ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಸಂತ್ರಸ್ತರ ಕುಟುಂಬದವರಿಗೆ ತಲಾ ₹2 ಲಕ್ಷ ಪರಿಹಾರ ಮಂಜೂರು ಮಾಡಲಾಗಿದೆ’ ಎಂದು ಪ್ರಧಾನಮಂತ್ರಿ ಕಚೇರಿಯು ಟ್ವೀಟ್‌ ಮೂಲಕ ತಿಳಿಸಿದೆ.

ವಿವಾದ ಸೃಷ್ಟಿಸಿದ ಸಚಿವ: ವಿರಾರ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರು ಬೆಳಿಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಆನಂತರ ಅದಕ್ಕೆ ಸ್ಪಷ್ಟನೆ ನೀಡಿದ ಘಟನೆ ನಡೆಯಿತು.

ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತ, ‘ವಿರಾರ್‌ ಆಸ್ಪತ್ರೆಯ ಘಟನೆ ರಾಷ್ಟ್ರೀಯ ಸುದ್ದಿ ಅಲ್ಲ’ ಎಂದಿದ್ದರು. ಆದರೆ, ಸ್ವಲ್ಪ ಹೊತ್ತಿನ ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ‘ಪ್ರಧಾನಿ ಜೊತೆಗೆ ಆಯೋಜಿಸಿದ್ದ ಸಭೆಯಲ್ಲಿ ರಾಷ್ಟ್ರೀಯ ಸಮಸ್ಯೆಗಳಾದ ಆಮ್ಲಜನಕ, ರೆಮ್‌ಡಿಸಿವಿರ್‌ ಕೊರತೆಗಳ ವಿಚಾರವಾಗಿ ಮಾತನಾಡುತ್ತೇನೆ ಎಂದು ನಾನು ಹೇಳುತ್ತಿದ್ದೆ. ಆ ಮಧ್ಯದಲ್ಲೇ ‘ವಿರಾರ್‌ ಘಟನೆಯ ಬಗ್ಗೆಯೂ ಮಾತನಾಡುತ್ತೀರಾ’ ಎಂದು ಪತ್ರಕರ್ತರೊಬ್ಬರು ಕೇಳಿದ್ದರು. ಆಗ ‘ಅದು ರಾಷ್ಟ್ರೀಯ ಸುದ್ದಿಯಲ್ಲ ಎಂದಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.